ಬಾಗಲಕೋಟೆ (ಡಿಸೆಂಬರ್ 18): ನಾಪತ್ತೆಯಾದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಕೇಸ್ ಇದೀಗ ಟ್ವಿಸ್ಟ್ ಪಡೆದುಕೊಂಡಿದ್ದು, ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರ ಬಾವನೊಂದಿಗೆ ಸೇರಿ ಹೆಂಡತಿ, ಗಂಡನನ್ನೇ ಕೊಲೆಗೈದಿರುವ ಘಟನೆ ಬಾಗಲಕೋಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಯಮನಪ್ಪ ಕರೆಣ್ಣವರ ಎಂಬಾತ ಹೆಂಡತಿ ರುಕ್ಮವ್ವ ಹಾಗೂ ತನ್ನ ದೊಡ್ಡಪ್ಪನ ಮಗ ಮುದಕಪ್ಪ(ಹಿರಿಗೆಪ್ಪ) ಮಧ್ಯೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಜಗಳವಾಡುತ್ತಿದ್ದಂತೆ. ಡಿಸೆಂಬರ್ 8 ರಂದು 32 ವರ್ಷದ ಯಮನಪ್ಪ ಕರೆಣ್ಣವರ ಎಂಬಾತನನ್ನು ಕೊಲೆಗೈದು ಕಬ್ಬಿನ ಹೊಲದಲ್ಲಿ ಬಿಸಾಕಿ, ನಾಪತ್ತೆಯಾಗಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದರು. ಸಂಬಂಧಿಕರ ಊರೆಲ್ಲಾ ಹುಡುಕಾಟದ ನಾಟಕವಾಡಿದ್ದಾರೆ. ಆದರೆ, ನಿನ್ನೆ ಯಮನಪ್ಪನ ಶವ ಕಬ್ಬಿನ ಹೊಲದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಕೇಸ್ ಟ್ವಿಸ್ಟ್ ಪಡೆದುಕೊಂಡಿದೆ.
ತಮಗೆ ಗಂಡ ಅಡ್ಡಿಯಾಗುತ್ತಾನೆ ಎಂದು ಗಂಡನಿಗೆ ಮುಹೂರ್ತ ಫಿಕ್ಸ್ ಮಾಡಿದ್ದ ಚಾಲಾಕಿ ಹೆಂಡತಿ ಪ್ರಿಯಕರನ ಜೊತೆ ಸೇರಿ ಡಿಸೆಂಬರ್ 8ರ ರಾತ್ರಿ ಮನೆಯಲ್ಲಿ ಯಮನಪ್ಪನನ್ನು ಟವೆಲ್ ನಿಂದ ಕತ್ತು ಹಿಸುಕಿ ಕೊಲೆಗೈದು ಕಬ್ಬಿನ ಹೊಲದಲ್ಲಿ ಬಿಸಾಕಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.

ಇನ್ನು ನಿನ್ನೆ ಕಾರ್ಮಿಕರು ಹಲಗಲಿ ಗ್ರಾಮದ ಎಚ್ ಆರ್ ಮಾಚಪ್ಪನವರ ಕಬ್ಬಿನ ಹೊಲದಲ್ಲಿ ಕಬ್ಬು ಕಟಾವು ಮಾಡುವ ವೇಳೆ ಯಮನಪ್ಪನ ಶವ ಪತ್ತೆಯಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7