ಬೆಳಗಾವಿ: ಸರ್ಕಾರಿ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಶಿಕ್ಷಕನನ್ನು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅಮಾನತುಗೊಳಿಸಿರುವ ಘಟನೆ ರಾಯಬಾಗದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅಮಾನತುಗೊಂಡವರು.
ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 146 ವಿದ್ಯಾರ್ಥಿಗಳಿದ್ದರೂ ಅಗತ್ಯ ಕೊಠಡಿಗಳಿಲ್ಲ. ಹಾಗಾಗಿ, ಮಕ್ಕಳ ಸಂಖ್ಯೆ ಅನುಸಾರ ಕೊಠಡಿಗಳ ಮಂಜೂರಾತಿ ಮಾಡುವಂತೆ ಮಂಗಳವಾರ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಉಪವಾಸ ಮತ್ತು ಮೌನ ಕಾಲ್ನಡಿಗೆ ಜಾಥಾವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯವರೆಗೆ ಕೈಗೊಂಡಿದ್ದರು. ಬಳಿಕ ಮೇಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ ಅವರು ಮನವೊಲಿಸಿದ್ದ ನಂತರವೇ ವೀರಣ್ಣ ಮಡಿವಾಳರ ಪ್ರತಿಭಟನೆ ಕೈ ಬಿಟ್ಟಿದ್ದರು.
ಈ ಹಿಂದೆ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅನ್ಬುಕುಮಾರ ಅವರು ಶಾಲೆಗೆ ಅಗತ್ಯವಾಗಿದ್ದ 3 ಶಾಲಾ ಕೊಠಡಿಗಳನ್ನು ಮಂಜೂರು ಮಾಡಿ ಮೂರು ವರ್ಷ ಕಳೆದಿವೆ. ಆದರೆ, ಈವರೆಗೂ ಕೊಠಡಿ ನಿರ್ಮಾಣಕ್ಕೆ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ವೀರಣ್ಣ ಮಡಿವಾಳರ ಆರೋಪಿಸಿದ್ದಾರೆ.