ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್, ವಿದ್ಯಾರ್ಥಿನಿ ರೂಪಾ ಪಾಟೀಲಗೆ ಬೆಳಗಾವಿ ಜಿಲ್ಲಾ ಪಂಚಾಯತನಲ್ಲಿ ಸನ್ಮಾನ
ಬೆಳಗಾವಿ ಜಿಲ್ಲೆಯಿಂದ ರಾಜ್ಯಕ್ಕೆ ಟಾಪರ್ ಆಗಿರುವ ವಿದ್ಯಾರ್ಥಿನಿ ರೂಪಾ ಪಾಟೀಲ್ ಅವರನ್ನು ಬೆಳಗಾವಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 925ಕ್ಕೆ 925 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿರುವ ಬೈಲಹೊಂಗಲ ತಾಲೂಕು ದೇವಲಾಪುರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕುಮಾರಿ ರೂಪಾ ಚೆನಗೌಡ ಪಾಟೀಲ ಅವರನ್ನು ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಬಸವರಾಜ್ ಅಡವಿಮಠ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೀಲಾವತಿ ಹಿರೇಮಠ, ಬಿಇಓ ಎ.ಎನ್. ಪ್ಯಾಟಿ, ಶಿಕ್ಷಣ ಇಲಾಖೆಯ ಮಿಲ್ಲಾನಟ್ಟಿ,ದೇವಲಾಪುರ ಗ್ರಾಮ ಪಂಚಾಯತ ಸರ್ಕಾರಿ ಪ್ರೌಢಶಾಲೆ ಎಸ್ಡಿಎಂಸಿ ಸದಸ್ಯರು, ಶಿಕ್ಷಕ, ಶಿಕ್ಷಕಿಯರು ಜಿಲ್ಲಾ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯ ಸನ್ಮಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರು,
ಬೈಲಹೊಂಗಲ ತಾಲೂಕು ದೇವಲಾಪುರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ್ ರಾಜ್ಯಕ್ಕೆ ಟಾಪರ ಆಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿನಿಗೆ ಟ್ಯಾಲೆಂಟ್ ಸರ್ಚ್ ಎಕ್ಷಮಗಳು ಸಹಕಾರಿಯಾಗಿವೆ. ಶಿಕ್ಷಕರು ಸಹ ಹೆಚ್ಚುವರಿ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ತಳಮಟ್ಟದಿಂದಲೇ ಬೋಧನೆ ಆರಂಭಿಸುತ್ತೇವೆ. ಈ ಬಾರಿ ಜಿಲ್ಲೆ ಐದು ರ್ಯಾಂಕ್ ಮುಂದೆ ಬಂದಿದೆ. ಇನ್ನೂ ನಿರೀಕ್ಷೆ ಗುರಿ ಹೆಚ್ಚು ಇದ್ದು ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.