2024 ರ ಲೋಕಸಭೆ ಚುನಾವಣೆ ನಂತರ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸಂಪೂರ್ಣ ಬಹುಮತದ ಗೆಲುವು ಪಡೆದಿರುವ ಬಿಜೆಪಿಯ ಗೆಲುವಿನ ಅಶ್ವಮೇಧ ಕುದುರೆಯನ್ನು ಸದ್ಯಕ್ಕಂತೂ ಯಾರೂ ಕಟ್ಟಿ ಹಾಕುವ ಲಕ್ಷಣ ಇಲ್ಲ. ಈ ಗೆಲುವು ಮುಂದಿನ ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದಬಹುದೇ, ಈ ಬಗ್ಗೆ ಇಲ್ಲಿದೆ ನೋಡಿ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದು ಮೊನ್ನೆ ಹೊರಬಿದ್ದಿದ್ದ ಮತಗಟ್ಟೆ ಸಮೀಕ್ಷೆಯ ಫಲಿತಾಂಶವನ್ನು ಹೋಲುವಂತಿದೆ. ಬಿಜೆಪಿ 48 ಸೀಟು ಮತ್ತು ಆಮ್ ಆದ್ಮಿ ಪಕ್ಷ 22 ಸೀಟು ಪಡೆದು, ಕಾಂಗ್ರೆಸ್ಗೆ ಯಾವ ಸ್ಥಾನವನ್ನೂ ನೀಡದಿರುವ ಸಾಧ್ಯತೆಯನ್ನು ಈ ಸಮೀಕ್ಷೆಗಳು ಮೊನ್ನೆಯೇ ಹೇಳಿದ್ದವು. ಆದರೂ, ಕಾಂಗ್ರೆಸ್ ಪಕ್ಷ ಮಾತ್ರ ಕನಿಷ್ಠ ಎರಡು ಸೀಟನ್ನಾದರೂ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿತ್ತು. ಆದರೆ ಅದು ಕೊನೆಗೂ ಫಲಿಸದೇ ನೆಲ ಕಚ್ಚುವಂತಾಗಿದೆ.
ಈ ಬಾರಿ, ಎಕ್ಸಿಸ್ ಮೈ ಇಂಡಿಯಾ ಹಾಗೂ ಇನ್ನೂ ಅನೇಕ ಸಂಸ್ಥೆಗಳು, ಚುನಾವಣೆ ಮುಗಿದ ಒಂದು ಗಂಟೆಯೊಳಗೆ ತಮ್ಮ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ನೀಡಿರಲಿಲ್ಲ. ಒಂದು ದಿನ ಕಾದು, ಕೆಲವು ಕಡೆ ಮತ್ತೊಮ್ಮೆ ಮರು ಸಮೀಕ್ಷೆ ಮಾಡಿ ತಮ್ಮ ವಿವೇಚನಾಯುತವಾದ ವಿಶ್ಲೇಷಣೆಯ ವಿವರವನ್ನು ನೀಡಿದ್ದವು. ಸ್ವತಃ ಅರವಿಂದ್ ಕೇಜ್ರಿವಾಲ್ ಅವರು ನಿಂತಿದ್ದ ಹೊಸ ದೆಹಲಿ ಕ್ಷೇತ್ರದಲ್ಲಿ, ಮರು ದಿನ ಮತ್ತೊಮ್ಮೆ ಸಮೀಕ್ಷೆ ನಡೆಸಿ, ಆಮ್ ಆದ್ಮಿ ಪಕ್ಷದ ನೇತಾರನ ಸೋಲಿನ ಬಗ್ಗೆ ಖಚಿತಪಡಿಸಿಕೊಂಡಿದ್ದವು. ಈ ದೃಷ್ಟಿಯಿಂದ ಈ ಚುನಾವಣಾ ಫಲಿತಾಂಶದ ‘ಭವಿಷ್ಯ’ ಮೊನ್ನೆಯೇ ಬಂದಿದ್ದು ಗಮನಾರ್ಹ ಸಂಗತಿ.
Laxmi News 24×7