ಬೆಂಗಳೂರು, ಜನವರಿ 30: ಮುಡಾ ಹಗರಣ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧದ ಜಾರಿ ನಿರ್ದೇಶನಾಲಯ ಸಮನ್ಸ್ ರದ್ದು ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ನಟೇಶ್ ವಿರುದ್ಧ ಪಿಎಂಎಲ್ಎ ಕಾಯ್ದೆ ಅಡಿಯ ಇಡಿ ಶೋಧನೆಯನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಳಿ ನಟೇಶ್ ದಾಖಲಿಸಿದ್ದ ಹೇಳಿಕೆಯನ್ನೂ ಹೈಕೋರ್ಟ್ ರದ್ದುಪಡಿಸಿದೆ. ಡಿಬಿ ನಟೇಶ್ ವಿರುದ್ಧ ಯಾವುದೇ ಅಧಿಸೂಚಿತ ಕೇಸ್ ದಾಖಲಾಗಿರಲಿಲ್ಲ. 14 ಸೈಟ್ ಹಂಚಿಕೆ ಕೇಸ್ನಲ್ಲಿ ಡಿ.ಬಿ.ನಟೇಶ್ ಆರೋಪಿಯಲ್ಲ. ಮುಡಾ ಮಾಜಿ ಆಯುಕ್ತರ ವಿರುದ್ಧ ನಂಬಲರ್ಹ ಆರೋಪಗಳಿಲ್ಲ. ಪ್ರಮುಖ ತನಿಖಾ ಸಂಸ್ಥೆಯಾಗಿರುವ ಇಡಿ ಕ್ರಮ ನ್ಯಾಯಸಮ್ಮತವಾಗಿರಬೇಕು ಎಂದು ಹೈಕೋರ್ಟ್ ಹೇಳಿದೆ.
ಏಕಪಕ್ಷೀಯ ಶೋಧನೆ ವಿರುದ್ಧವೂ ವ್ಯಕ್ತಿಗೆ ಖಾಸಗಿತನದ ಹಕ್ಕಿದೆ. ಮೇಲ್ನೋಟಕ್ಕೆ ಸಾಕ್ಷ್ಯಗಳಿಲ್ಲದಿದ್ರೂ ಇಡಿ ನಟೇಶ್ ಅವರನ್ನು ಶೋಧನೆಗೆ ಒಳಪಡಿಸಿದ್ದು ಕಾನೂನುಬಾಹಿರ ಎಂದು ನ್ಯಾ. ಹೇಮಂತ ಚಂದನ ಗೌಡರ್ ಅವರ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
Laxmi News 24×7