ಕಾರವಾರ: “ಹಣ್ಣು ಮತ್ತು ತರಕಾರಿ ತುಂಬಿಕೊಂಡು ವ್ಯಾಪಾರಸ್ಥರೊಂದಿಗೆ ತೆರಳುತ್ತಿದ್ದ ಲಾರಿ ಇಂದು ಮುಂಜಾನೆ ಕಂದಕಕ್ಕೆ ಬಿದ್ದು 10 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಲಾರಿ ಬಿದ್ದಿರುವ ಸ್ಥಳ ಸಾಮಾನ್ಯವಾಗಿ ಯಾರಿಗೂ ಕಾಣುವುದಿಲ್ಲ. ಆದರೆ, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿ ಅಡಿ ಸಿಲುಕಿದ್ದವರನ್ನು ಹೊರ ತೆಗೆದು ಗಂಭೀರ ಗಾಯಗೊಂಡಿದ್ದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವ ಕಾಪಾಡಿದ್ದಾರೆ” ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
“ಹಾವೇರಿಯ ಸವಣೂರಿನಿಂದ ಮಂಗಳವಾರ ತಡರಾತ್ರಿ ಹಣ್ಣು ಹಾಗೂ ತರಕಾರಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಶಿರಸಿ ಕುಮಟಾ ಹೆದ್ದಾರಿ ಬಂದ್ ಆದ ಕಾರಣ ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ ಮಾರ್ಗವಾಗಿ ಕುಮಟಾದ ಸಂತೆಗೆ ತೆರಳುತ್ತಿದ್ದರು. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಯಲ್ಲಾಪುರದ ಅರೆಬೈಲ್ ಘಟ್ಟ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಂದಕಕ್ಕೆ ಉರುಳಿದೆ ಎನ್ನಲಾಗುತ್ತಿದೆ. ಮುಂಜಾನೆ ಇಬ್ಬನಿ ಹೆಚ್ಚಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿರಬಹುದು. ಆದರೆ, ಇದು ತನಿಖೆಯಿಂದ ತಿಳಿದುಬರಬೇಕಿದೆ. ಮೇಲ್ನೋಟಕ್ಕೆ ಈ ಅಪಘಾತ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬಳಿಕ ನಿಖರ ಮಾಹಿತಿ ತಿಳಿಯಲಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
Laxmi News 24×7