ಬೆಳಗಾವಿ: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಕಠಿಣ ಪರಿಶ್ರಮ, ಸಾಧಿಸುವ ಛಲ, ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಬಡ ಕುಟುಂಬದ ಅದರಲ್ಲಿಯೂ ಕುರಿಗಾಹಿ ದಂಪತಿ ಪುತ್ರಿಯೊಬ್ಬರು ಈಗ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯ್ಯಲು ಅಣಿಯಾಗಿರುವುದೇ ಸಾಕ್ಷಿ. ಇವರು ಪಕ್ಕಾ ಬಡತನದಲ್ಲೇ ಅರಳುತ್ತಿರುವ ಪ್ರತಿಭೆ. ಆದರೆ, ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರ ಗ್ರಾಮದ ಪವಿತ್ರಾ ತಡಸಲೂರ ಎಂಬುವವರು ಥ್ರೋ ಬಾಲ್ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿರುವ ಬಾಲಕಿ.
ಮರಡಿ ನಾಗಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪವಿತ್ರಾ 10ನೇ ತರಗತಿ ಓದುತ್ತಿದ್ದಾರೆ. ಇವರ ಕುಟುಂಬ ತೀರಾ ಬಡತನದ ಹಿನ್ನೆಲೆ ಹೊಂದಿದೆ. ತಂದೆ ಸಿದ್ದಪ್ಪ, ತಾಯಿ ಸಿದ್ದವ್ವ ಕುರಿಗಾಹಿಗಳು. ಕುರಿ ಕಾಯುವ ವೃತ್ತಿಯಿಂದಲೇ ಜೀವನ ಮಾಡುವ ಈ ಕುಟುಂಬದ ಬಾಲಕಿ ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಮುಂದಾಗಿದ್ದು, ತಂದೆ ತಾಯಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಇತ್ತೀಚಿಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಿತು. ಈ ವೇಳೆ ಥ್ರೋಬಾಲ್ ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲೆಯ 9 ಮತ್ತು ಖಾನಾಪುರದ ಇಬ್ಬರು ಆಟಗಾರರ ಜೊತೆಗೆ ತಂಡಕ್ಕೆ ಆಯ್ಕೆಯಾಗಿದ್ದರು. ಮೈಸೂರು, ಕಲಬುರ್ಗಿ ಮತ್ತು ಬೆಂಗಳೂರು ತಂಡಗಳ ಜೊತೆಗೆ ಗೆದ್ದು ರಾಷ್ಟ್ರಮಟ್ಟಕ್ಕೆ ಇವರು ಆಯ್ಕೆಯಾಗಿದ್ದಾರೆ. ಮೂರು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಪವಿತ್ರಾ ಉತ್ತಮ ಕೊಡುಗೆ ನೀಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
Laxmi News 24×7