ಬಳ್ಳಾರಿ : ಇದೊಂದು ವಿಶೇಷ ಜಾತ್ರೆ. ಜಾತ್ರೆಯ ದಿನ ಆ ಊರಿನಲ್ಲಿ ಯಾವೊಬ್ಬ ವ್ಯಕ್ತಿಯೂ ಇರಲ್ಲ. ಮನುಷ್ಯರು ಮಾತ್ರವಲ್ಲ, ಗ್ರಾಮದಲ್ಲಿರುವ ದನಕರುಗಳಿಂದಿಡಿದು ಸಾಕು ಪ್ರಾಣಿಗಳು ಆ ಊರಿನಲ್ಲಿ ಇರುವುದಿಲ್ಲ. ಮನೆಗಳಿಗೆಲ್ಲ ಜನರು ಬೀಗ ಹಾಕಿರುತ್ತಾರೆ. ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿರುತ್ತೆ!
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯ ಜಾತ್ರೆ ನಡೆಯೋದು ಗ್ರಾಮದ ಒಳಗಲ್ಲ, ಬದಲಾಗಿ ಗ್ರಾಮದ ಹೊರವಲಯದಲ್ಲಿ. ಇದಕ್ಕಾಗಿ ಇಲ್ಲಿಯ ಜನತೆ ತಮ್ಮ ಗ್ರಾಮ ಬಿಟ್ಟು ಜಾತ್ರೆಗೆ ಹೋಗ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಗ್ರಾಮದ ಜನರೆಲ್ಲ ಜಾತ್ರೆಗೆ ಹೋಗಲೇಬೇಕು. ಮನೆಯಲ್ಲಿ ಯಾರೂ ಇರುವಂತಿಲ್ಲ.
ಹೌದು, ಇದು ಚೋರನೂರು ಗ್ರಾಮದಲ್ಲಿ ನಡೆಯುವ ಗುಳೇದ ಲಕ್ಕಮ್ಮ ದೇವಿ ಜಾತ್ರೆಯ ವೈಶಿಷ್ಟತೆ. ಈ ಜಾತ್ರೆಯ ವಿಶೇಷತೆ ಏನಂದ್ರೆ ಜಾತ್ರೆಯ ದಿನ ಈ ಗ್ರಾಮದಲ್ಲಿ ಯಾರೂ ಕೂಡ ಇರೋದಿಲ್ಲ. ಮನೆಗಳಿಗೆ ಬೀಗ ಹಾಕಿಕೊಂಡು, ದವಸ ಧಾನ್ಯಗಳನ್ನ ತೆಗೆದುಕೊಂಡು, ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಸಣ್ಣ ಸಣ್ಣ ಟೆಂಟ್ಗಳನ್ನ ಹಾಕಿಕೊಳ್ಳುತ್ತಾರೆ. ಜಾತ್ರೆಗೆ ಬಂದ ಬೀಗರು ಕೂಡ ಇಲ್ಲಿಯೇ ಉಳಿಯುತ್ತಾರೆ. ಊರ ಹೊರಗಡೆಯೇ ಅಡುಗೆ ಮಾಡಿಕೊಂಡು ಹಬ್ಬದ ಊಟ ಸವಿಯುತ್ತಾರೆ.
ಈ ಜಾತ್ರೆಯಲ್ಲಿ ಸಿಹಿಗಿಂತ ಹೆಚ್ಚಾಗಿ ರೊಟ್ಟಿ ಊಟ ಹೆಚ್ಚು. ಎಳ್ಳು ಹಚ್ಚಿದ ಸಜ್ಜೆ ಹಾಗೂ ಜೋಳದ ರೊಟ್ಟಿ, ಹತ್ತಾರು ಬಗೆಯ ಕಾಳುಗಳು, ಸೊಪ್ಪು, ಐದಾರು ಬಗೆಯ ಚಟ್ನಿ ಪುಡಿ, ಎಣ್ಣೆ ಬದನೆಕಾಯಿ ಹೀಗೆ ತರಹೇವಾರಿ ಪಲ್ಯಗಳು ಸಿದ್ಧವಾಗುತ್ತವೆ. ಗ್ರಾಮದಿಂದ 3 ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಲಕ್ಕಮ್ಮ ದೇವಿಯ ಪುತ್ರಿಯನ್ನ ಮೆರವಣಿಗೆ ಮೂಲಕ ತರಲಾಗುತ್ತದೆ. ಆಗ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಾರೆ.
Laxmi News 24×7