ವಿಜಯಪುರ,: ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈ ಪ್ರಕರಣದ ಹಿಂದೆ ಮಹಿಳೆಯ ಪತಿಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಎಡದಂಡೆ ಕಾಲುವೆಗೆ ಭಾಗ್ಯಶ್ರೀ ಭಜಂತ್ರಿ ಎನ್ನುವ ಮಹಿಳೆ ಹಾಗೂ ನಾಲ್ವರು ಎಳೆಯ ಮಕ್ಕಳು ಬಿದ್ದಿದ್ದರು. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದರೆ ಮಹಿಳೆಯನ್ನು ರಕ್ಷಿಸಲಾಗಿತ್ತು. ಇದೀಗ ಮಹಿಳೆಯೇ ಖುದ್ದಾಗಿ ಮಾಹಿತಿ ನೀಡಿ, ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ತನ್ನ ತವರು ಮನೆಯಲ್ಲಿ ಸಹೋದರರ ಜಗಳದಿಂದ ಬೇಸರಗೊಂಡು ಪತ್ನಿ ಭಾಗ್ಯಶ್ರೀ ಭಜಂತ್ರಿ ಮಕ್ಕಳ ಸಮೇತ ಆತ್ಮಹತ್ಯೆಗೆ ಯತ್ನಿದ್ದರು ಎಂದು ಆಕೆಯ ಪತಿ ಅಲವತ್ತುಕೊಂಡಿದ್ದರು. ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಭಾಗ್ಯಶ್ರೀ ಭಜಂತ್ರಿ ಇದೀಗ ನಿಜ ಮಾಹಿತಿ ಬಹಿರಂಗಪಡಿಸಿದ್ದಾರೆ. ತನ್ನ ಪತಿಯೇ ವಿಷ ಹಾಕಿ ತಮ್ಮನ್ನು ಕಾಲುವೆಗೆ ಎಸೆದನೆಂದು ಆಕೆ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ.

ಮೃತಪಟ್ಟ ನಾಲ್ವರು ಮಕ್ಕಳು…
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನಿನ್ನೆ ದುರಂತ ಘಟನೆ ನಡೆದಿತ್ತು. ಮಹಿಳೆ ಹಾಗು ಮಕ್ಕಳು ನೀರಿಗೆ ಬಿದ್ದಿರುವುದನ್ನು ಕಂಡ ಮೀನುಗಾರರು ಹಾಗೂ ಮಲ್ಲಪ್ಪ ಸುಳೇ ಹಾಗೂ ಸ್ಥಳೀಯ ಯುವಕರ ತಂಡವು ಬೈಕಿನ ಕೇಬಲ್ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದರು. ಆದರೆ, ನಾಲ್ವರು ಮಕ್ಕಳನ್ನು ಉಳಿಸಲು ಆಗಲಿಲ್ಲ. ಈ ನಾಲ್ವರು ಮಕ್ಕಳಲ್ಲಿ ಇಬ್ಬರ ಶವಗಳು ಸಿಕ್ಕರೆ, ಇನ್ನಿಬ್ಬರು ಮಕ್ಕಳ ಶವ ಸಿಕ್ಕಿಲ್ಲ. ತನು (5) ರಕ್ಷಾ (3) ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ 13 ತಿಂಗಳ ಅವಳಿಜವಳಿ ಗಂಡು ಮಕ್ಕಳು ಸಾವನ್ನಪ್ಪಿವೆ.
ಇದೇ ವೇಳೆ ಅಲ್ಲಿಗೆ ಬಂದ ಮಹಿಳೆ ಪತಿ ನಿಂಗರಾಜ್ ಭಜಂತ್ರಿ ಬಂದು ಗೋಳಾಡುತ್ತಾನೆ. ಹೆಂಡತಿ ಮಕ್ಕಳೊಂದಿಗೆ ನಿಡುಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮದ ಎಲ್ಲಮ್ಮ ದರ್ಶನಕ್ಕೆ ತೆಲಗಿ ಗ್ರಾಮದಿಂದ ಹೊರಟಿದ್ದೆವು. ನಾಲೆ ಬಳಿ ಬಂದಾಗ ಬೈಕ್ನಲ್ಲಿನ ಪೆಟ್ರೋಲ್ ಖಾಲಿಯಾಗಿತ್ತು. ತಾನು ಪೆಟ್ರೋಲ್ ತರಲು ಹೋಗಿ ಬರುವಷ್ಟರಲ್ಲಿ ಇಲ್ಲಿ ಜನ ಸೇರಿದ್ದರು. ಯಾಕೆ ಸೇರಿದ್ದಾರೆ ಎಂದು ನೋಡಿದಾಗ ತನ್ನ ಪತ್ನಿ ಹಾಗೂ ಮಕ್ಕಳೇ ಕಾಲುವೆ ಪಾಲಾಗಿದ್ದರು ಎಂದು ಗೋಳಾಡಿ ಕಣ್ಣೀರು ಹಾಕಿದ್ದಾನೆ.
Laxmi News 24×7