ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗು ಶಕ್ತಿ ಪೀಠಗಳಲ್ಲಿ ಒಂದಾಗಿರುವ ಬಾದಾಮಿ ಬನಶಂಕರಿ ದೇವಾಲಯ ಜಾತ್ರಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು.
ಪ್ರತಿವರ್ಷವೂ ಬನದ ಹುಣ್ಣಿಮೆ ದಿನ ಜಾತ್ರೋತ್ಸವದ ಪ್ರಯುಕ್ತ ರಥೋತ್ಸವ ನಡೆಯುತ್ತದೆ. ಅದರಂತೆ, ಲಕ್ಷಾಂತರ ಭಕ್ತರ ಮಧ್ಯೆ ದೇವಿಗೆ ಶಂಭೋಕೋ ಎಂದು ಘೋಷಣೆ ಮೊಳಗಿಸುತ್ತಾ ಭಕ್ತರು ರಥ ಎಳೆದು ಸಂಭ್ರಮಿಸಿದರು.
ಈ ಜಾತ್ರೆಗೆ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಪಾದಯಾತ್ರೆ ಮೂಲಕವೂ ಸಾವಿರಾರು ಭಕ್ತರು ಬರುತ್ತಾರೆ. ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಕಾಂಗ್ರೆಸ್ ಪಕ್ಷದ ಮುಖಂಡ ಮಹಾಂತೇಶ ಹಟ್ಟಿ ಹಾಗೂ ಸಾಮಾಜಿಕ ಸೇವಕರು ದಾರಿಯುದ್ದಕ್ಕೂ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.
ಬನಶಂಕರಿ ಜಾತ್ರೆ ಒಂದು ತಿಂಗಳ ಕಾಲ ನಡೆಯುತ್ತದೆ. ನಾಟಕ ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತಿದಿನ ಸಂಜೆಯಿಂದ ಬೆಳಗಿನವರೆಗೆ ನಾಲ್ಕು ಆಟಗಳ ಪ್ರದರ್ಶನ ನಡೆಯುತ್ತದೆ. ಈ ಬಾರಿ ಹತ್ತು ನಾಟಕ ಕಂಪನಿಗಳು ಬಂದಿದ್ದು, ವಿವಿಧ ಹಾಸ್ಯ ಕಲಾವಿದರು ಅಭಿನಯಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.
Laxmi News 24×7