ಹಾವೇರಿ : ಬೆಂಗಳೂರಿನ ಚಾಮರಾಜಪೇಟಿಯ ವಿನಾಯಕ ನಗರದ ಹಸುಗಳ ಕೆಚ್ಚಲು ಕತ್ತರಿಸಿದ ಘಟನೆಗೆ ಹಾವೇರಿಯ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ತಾಯಿ ಹಾಲಿಗಿಂತ ಹೆಚ್ಚು ಗೋವಿನ ಹಾಲು ಕುಡಿದು ಬೆಳೆದವನು. ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಆರೋಪಿಗಳು ಹಸುವಿನ ಕೆಚ್ಚಲು ಕೊಯ್ದು ಆಮಾನವೀಯವಾಗಿ ವರ್ತಿಸಿದ್ದಾರೆ. ಗೋಮಾತೆ ಯಾವುದೇ ಜಾತಿಮತಗಳನ್ನು ನೋಡದೆ ಎಲ್ಲರಿಗೂ ಹಾಲು ನೀಡುತ್ತೆ. ಎಲ್ಲ ಜಾತಿಮತಗಳು ಸಹ ಗೋವುಗಳ ಸಂರಕ್ಷಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಶೋಚನೀಯ ಎಂದು ಶ್ರೀಗಳು ಹೇಳಿದರು.ಇನ್ನು, ಈ ರೀತಿಯ ಘಟನೆಗಳು ನಡೆದಾಗ ಹಿಂದೂ ಸಂಘಟನೆಗಳು ಉದ್ರಿಕ್ತರಾಗುವ ಸಾಧ್ಯತೆ ಇದೆ. ಆದರೆ ಈ ಸಂದರ್ಭದಲ್ಲಿ ಉದ್ರಿಕ್ತರಾಗುವ ಬದಲು ಯೋಚನೆ ಮಾಡಿ ಹೆಜ್ಜೆ ಇಡುವಂತೆ ಶ್ರೀಗಳು ಸಲಹೆ ನೀಡಿದರು. ರಾಜ್ಯದಲ್ಲಿ ಈ ರೀತಿಯ ಕಾರ್ಯಗಳು ನಿಲ್ಲಬೇಕು, ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಣ್ಣದಮಠ ಶ್ರೀಗಳು ಒತ್ತಾಯಿಸಿದರು.
Laxmi News 24×7