ಮೈಸೂರು: ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳ ಸಾವು ಪ್ರಕರಣ ಸಂಬಂಧ ನಾವು ತಪಾಸಣೆ ಮಾಡಿದಾಗ ಸಾವಿಗೆ ಕಾರಣ ಏನೆಂಬುದು ದೃಢಪಟ್ಟಿಲ್ಲ. ಹೀಗಾಗಿ, ಎಫ್ಎಸ್ಎಲ್ಗೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ಕೆ.ಆರ್. ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ.ದಿನೇಶ್ ಹೇಳಿದರು.
ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ ಅವರು, ”ನಮ್ಮ ಆಸ್ಪತ್ರೆಗೆ ಮೂರು ಸಜಾ ಕೈದಿಗಳು ಹೊಟ್ಟೆ ನೋವಿನ ಕಾರಣಕ್ಕಾಗಿ ದಾಖಲಾಗಿದ್ದರು. ಅದರಲ್ಲಿ ರಮೇಶ್ ಡಿ.26ರಂದು ಮತ್ತು ಮಾದೇಶ್ ಡಿ.29ರಂದು ಹಾಗೂ ನಾಗರಾಜು ಡಿ.30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮಲ್ಲಿ ಬಂದಾಗ ಅವರು ತೀವ್ರ ವಾಂತಿ, ಬೇದಿಯಿಂದ ಅವರು ಬಳಲುತ್ತಿದ್ದರು. ಆದ ಕಾರಣ ಫುಡ್ ಇನ್ಫೆಕ್ಷನ್ ಆಗಿರಬಹುದು ಎಂದು ದಾಖಲು ಮಾಡಿಕೊಳ್ಳಲಾಗಿತ್ತು. ಅದಕ್ಕೆ ತಕ್ಕಂತೆ ಚಿಕಿತ್ಸೆ ಪ್ರಾರಂಭ ಮಾಡಿ, ಕೆಲವು ತಪಾಸಣೆಗಳನ್ನು ನಡೆಸಿದೆವು. ಆಗ ಕಿಡ್ನಿಗೆ ಸಂಬಂಧಿಸಿದಂತೆ ವ್ಯತ್ಯಾಸ ಕಂಡು ಬಂದಿತ್ತು” ಎಂದರು.
”ಹೀಗಾಗಿ ಡಯಾಲಿಸಿಸ್ ಮಾಡಲು ಪ್ರಾರಂಭಿಸಿದೆವು. ಆದರೆ, ದಿನ ಕಳೆದಂತೆ ರಮೇಶ್ ಎನ್ನುವ ಕೈದಿಗೆ ಕಿವಿ ಕೇಳುವುದು ಕಡಿಮೆ ಆಯಿತು. ಇದೇ ಸಮಯದಲ್ಲಿ ಇನ್ನಿಬ್ಬರೂ ಕೂಡ ಆಸ್ಪತ್ರೆಗೆ ದಾಖಲಾದರು. ಹೀಗಾಗಿ, ನಮಗೆ ಅನುಮಾನ ಬಂದು ಅವರನ್ನು ಒತ್ತಾಯ ಮಾಡಿ ಏನಾಗಿತ್ತು ಎಂದು ಕೇಳಿದೆವು. ಅಗ ಕೇಕ್ ತಯಾರು ಮಾಡಲು ಬಳಸುವ ಎಸೆನ್ಸ್ ಸೇವಿಸಿದ್ದೇವೆ ಎಂದು ಹೇಳಿದರು. ಬಳಿಕ ಅದನ್ನು ತರಿಸಿಕೊಂಡು ಯಾವ ಪ್ರಮಾಣದಲ್ಲಿ ಕುಡಿದಿದ್ದಾರೆ ಎಂದು ಪರೀಕ್ಷಿಸಲು ಮುಂದಾದಾಗ ಮೂರು ಜನ ಕೈದಿಗಳ ಸ್ಥಿತಿ ಗಂಭೀರವಾಗುತ್ತ ಬಂತು. ಆದ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ, ಅವರ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
Laxmi News 24×7