ಬೆಳಗಾವಿ: “ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಒಂದು ರೀತಿ ಅವರದ್ದು ಪವಾಡದ ಬದುಕಾಗಿತ್ತು. ದೇಶವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಇವತ್ತಿನ ಪಾಕಿಸ್ತಾನ ದೇಶದ ಕುಗ್ರಾಮವೊಂದರಲ್ಲಿ ಜನಿಸಿದ್ದರು. ಅಲ್ಲಿಂದ ದೇಶ ಅಷ್ಟೇ ಅಲ್ಲದೇ ಜಗತ್ತಿನ ಓರ್ವ ಪ್ರಸಿದ್ದ ಆರ್ಥಿಕ ತಜ್ಞರಾಗಿ ಖ್ಯಾತರಾಗಿದ್ದರು. ಪಿ.ವಿ. ನರಸಿಂಹರಾಯರ ಆಡಳಿತದಲ್ಲಿ ಐದು ವರ್ಷ ಆರ್ಥಿಕ ಮಂತ್ರಿಯಾಗಿ ಕೆಲಸ ಮಾಡಿದ್ದರು. ಆ ಕಾಲದಲ್ಲಿ ಸುಧಾರೀಕರಣ, ಖಾಸಗೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತಂದು ಕೊಟ್ಟರು. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ದೇಶ ಮುಕ್ತವಾಯಿತು ಎಂಬುದನ್ನು ನಾವು ಸ್ಮರಿಸಬೇಕಾಗುತ್ತದೆ” ಎಂದರು.
“ಅದಾದ ಮೇಲೆ 2004ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದ ವೇಳೆ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲು ನಿರಾಕರಿಸಿದರು. ಬಳಿಕ ಮನಮೋಹನ ಸಿಂಗ್ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರು. 10 ವರ್ಷಗಳ ಕಾಲ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಎತ್ತುವ ಮಹತ್ತರ ಕಾರ್ಯ ಮಾಡಿದ್ದರು” ಎಂದು ಮೆಲುಕು ಹಾಕಿದರು.
“ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿಗಳಲ್ಲಿ ಇವರು ಒಬ್ಬರಾಗಿದ್ದರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣುವುದು ಕಷ್ಟ. ಆದರೆ, ಇವರು ಹತ್ತು ವರ್ಷಗಳ ಕಾಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ” ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
Laxmi News 24×7