ಬೆಳಗಾವಿ, ಡಿಸೆಂಬರ್ 13: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್ ವಿಚಾರವಾಗಿ ಚರ್ಚೆ ನಡೆಸುವಂತೆ ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಗುರುವಾರ ಪಟ್ಟು ಹಿಡಿದರು. ವಿಧಾನಪರಿಷತ್ನಲ್ಲೂ ಇದೇ ರೀತಿ ನಡೆಯಿತು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಲಾಠಿಚಾರ್ಜ್ ಮಾಡಿದ್ದನ್ನು ಸರ್ಮಥಿಸಿಕೊಂಡರು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದವರನ್ನು ಬಿಟ್ಟು ಬಿಡಬೇಕಿತ್ತಾ ಎಂದು ಪ್ರಶ್ನಿಸಿದರು.
ಗೃಹ ಸಚಿವರ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೋರಾಟ ಮಾಡುವುದು ತಪ್ಪಲ್ಲ. ಹಿಂದೆ ಮುರುಗೇಶ್ ನಿರಾಣಿಯವರನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಮೀಸಲಾತಿ ಹೆಸರಲ್ಲಿ ಹೋರಾಟ ಶುರು ಮಾಡಿದ್ದರು ಎಂದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ವಿಧಾನಸಭೆಯಲ್ಲೂ ಪಂಚಮಸಾಲಿ ಹೋರಾಟದ ವಿಚಾರವಾಗಿ ಮಾತನಾಡಿದ ಶಾಸಕ ವಿಜಯಾನಂದ್ ಕಾಶಪ್ಪನವರ್, ಇದು ಬಿಜೆಪಿ ಪ್ರಾಯೋಜಿತ ಹೋರಾಟ, ಗಲಾಟೆಯಲ್ಲಿ ಕಲ್ಲು ತೂರಿದವರು ಆರ್ಎಸ್ಎಸ್ನವರು ಎಂದು ಆರೋಪಿಸಿದರು. ಆಗ ದೊಡ್ಡ ಜಟಾಪಟಿಯೇ ನಡೆಯಿತು.
ಸಿದ್ದರಾಮಯ್ಯಗೆ ಹಿಂದೂಗಳ ಮೇಲೆ ದ್ವೇಷವೇಕೆ: ಯತ್ನಾಳ್ ಪ್ರಶ್ನೆ
ಪಂಚಮಸಾಲಿ ಮೀಸಲಾತಿ ಒತ್ತಾಯ ಸಂವಿಧಾನ ವಿರೋಧಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದರು. ಸಿಎಂಗೆ ಹಿಂದೂಗಳು ಎಂದರೆ ದ್ವೇಷವೇಕೆ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಸಂತೋಷ್ ಲಾಡ್ ವಾಕ್ಸಮರ ಆರಂಭಿಸಿದರು.
ಏತನ್ಮಧ್ಯೆ, ಮೀಸಲಾತಿ ಬಗ್ಗೆ ಚರ್ಚಿಸಲು ಜಯಮೃತ್ಯುಂಜಯ ಸ್ವಾಮೀಜಿಗೆ ಸಿಎಂ ಸಿದ್ದರಾಮಯ್ಯ ಸಮಯ ನೀಡಿದರು. ತಮ್ಮ ಜೊತೆ 10 ಜನ ಕರೆದುಕೊಂಡು ಬರುವುದಕ್ಕೆ ಸಿಎಂ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುವರ್ಣಸೌಧದಲ್ಲಿ ಹೇಳಿದರು. ಇದೇ ವಿಚಾರವನ್ನ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಾ ವಿಧಾನಸಭೆಯಲ್ಲಿ ಹೇಳಿದರು. ಆದರೆ, ಸಿಎಂ ಮಾತುಕತೆಗೆ ಕರೆದಿದ್ದಾರೆ ಎಂದು ಸಚಿವರು ಹೇಳಿಲ್ಲ, ಬೇಕಿದ್ದರೆ ಆಣೆ ಮಾಡುತ್ತೇನೆ ಎಂದು ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
Laxmi News 24×7