Breaking News

ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Spread the love

ಮ್ಮ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯನ್ನು ಹೊಂದಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನ.20ರಂದು ಒಂದೇ ಹಂತದಲ್ಲಿ ನಡೆಯಲಿದೆ. 2019ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ನಡೆಯಲಿರುವ ಚುನಾವಣೆ ಒಂದು ರೀತಿ “ಮಾಡು ಇಲ್ಲವೇ ಮಡಿ’ ಎಂಬ ನಾಣ್ಣುಡಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.

ಅದಕ್ಕೆ ಕಾರಣಗಳೂ ಇಲ್ಲದಿಲ್ಲ.

288 ಸದಸ್ಯ ಬಲದ ವಿಧಾನಸಭೆಗೆ 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಗೆ 105, ಶಿವಸೇನೆಗೆ 56, ಎನ್‌ಸಿಪಿಗೆ 54, ಕಾಂಗ್ರೆಸ್‌ಗೆ 44, ಪಕ್ಷೇತರರು ಮತ್ತು ಇತರರು 19 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿ ಉದ್ಧವ್‌ ಠಾಕ್ರೆ ಬಿಜೆಪಿ ಜತೆಗೆ ಮುನಿಸಿಕೊಂಡು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗೂಡಿದ್ದಲ್ಲದೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸ್ಥಾಪಿಸಿದ್ದರು.

ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರ 2022 ಜೂನ್‌ವರೆಗೆ ಅಧಿಕಾರದಲ್ಲಿತ್ತು. ಅನಂತರ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಪ್ರತ್ಯೇಕಗೊಂಡು ಬಿಜೆಪಿ ಜತೆಗೆ ಸೇರಿ ಹೊಸ ಸರಕಾರ ರಚನೆಯಾಯಿತು. 2023ರಲ್ಲಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ವಿಭಜನೆಯಾಗಿ ಅಜಿತ್‌ ಪವಾರ್‌ ನೇತೃತ್ವದಲ್ಲಿ ಒಂದಷ್ಟು ಮಂದಿ ಶಾಸಕರು ಬಿಜೆಪಿ ಮತ್ತು ಏಕನಾಥ ಶಿಂಧೆ ಬಣದ ಶಿವಸೇನೆ ಮೈತ್ರಿಕೂಟಕ್ಕೆ ಸೇರ್ಪಡೆಯಾದರು.

ಎಪ್ರಿಲ್‌-ಮೇಯಲ್ಲಿ ಲೋಕಸಭೆಗೆ ನಡೆದಿದ್ದ ಚುನಾ ವಣೆಯಲ್ಲಿ 48 ಕ್ಷೇತ್ರಗಳ ಪೈಕಿ ಬಿಜೆಪಿ-ಏಕನಾಥ ಶಿಂಧೆ ಬಣ ಶಿವಸೇನೆ- ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡ ಮಹಾಯುತಿ 17, ಕಾಂಗ್ರೆಸ್‌-ಉದ್ಧವ್‌ ಠಾಕ್ರೆ ಬಣದ ಶಿವಸೇನೆ- ಶರದ್‌ ಪವಾರ್‌ ಬಣದ ಎನ್‌ಸಿಪಿ ಮೈತ್ರಿಕೂಟ 30, ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಗೆದ್ದಿದ್ದರು. ಹೀಗಾಗಿ, ಅಜಿತ್‌ ಪವಾರ್‌, ಏಕನಾಥ ಶಿಂಧೆ, ದೇವೇಂದ್ರ ಫ‌ಡ್ನವೀಸ್‌, ಉದ್ಧವ್‌ ಠಾಕ್ರೆಗೆ ರಾಜಕೀಯವಾಗಿ ಮಹತ್ವದ್ದು.

288 ಸದಸ್ಯ ಬಲ, 6 ವಲಯ
ಪಶ್ಚಿಮ ಮಹಾರಾಷ್ಟ್ರ (58 ಕ್ಷೇತ್ರ): 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ 10 ಕ್ಷೇತ್ರಗಳನ್ನು ಗೆದ್ದಿತ್ತು. ಅವಿಭಜಿತ ಎನ್‌ಸಿಪಿ 21, ಮೋದಿ ಅಲೆಯ ಪ್ರಭಾವದಿಂದ ಬಿಜೆಪಿ 19 ಕ್ಷೇತ್ರಗಳನ್ನು ಗೆದ್ದಿತ್ತು. ಅಪರಾಧ ಪ್ರಕರಣಗಳು ಇಲ್ಲಿ ಸವಾಲಾಗಿವೆ. ಬಾರಾಮತಿ, ಕೊಲ್ಹಾಪುರ, ಸೋಲಾಪುರ, ಮಾಧಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಮುಂದಾಗಿದೆ.

ಉತ್ತರ ಮಹಾರಾಷ್ಟ್ರ (47 ಕ್ಷೇತ್ರ): ಈ ಪ್ರದೇಶದಲ್ಲಿ ಎನ್‌ಸಿಪಿ ಮತ್ತು ಶಿವಸೇನೆಯ ವಿಭಜನೆ ಅಂಶದ ಮೇಲೆ ಪರಿಣಾಮ ಬೀರಲಿದೆ. ಜಲಗಾಂವ್‌, ನಾಶಿಕ್‌, ಅಹ್ಮದ್‌ನಗರಗಳಲ್ಲಿ 2 ಪಕ್ಷಗಳ ನಾಯಕರ ಸಾಧನೆಯನ್ನು ಮತದಾರರು ತೀರ್ಮಾನಿಸಲಿದ್ದಾರೆ. ಇದಲ್ಲದೆ ಈರುಳ್ಳಿ ಬೆಳೆಯ ಕೇಂದ್ರ ಸ್ಥಾನವಾಗಿರುವ ಇಲ್ಲಿ 2023ರಲ್ಲಿ ಅದನ್ನು ರಫ್ತು ಮಾಡುವುದರ ಮೇಲೆ ಹೇರಲಾಗಿದ್ದ ನಿರ್ಬಂಧ, ಶೇ.40 ರಫ್ತು ಸುಂಕ ವಿಧಿಸಿದ್ದು ಬೆಳೆಗಾರರು ಕೋಪಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ.

ವಿದರ್ಭ (62 ಕ್ಷೇತ್ರ): ಹೆಚ್ಚಿನ ಪ್ರಮಾಣದಲ್ಲಿ ರೈತರ ಆತ್ಮಹತ್ಯೆಯಿಂದ ಸುದ್ದಿಯಾಗಿದ್ದ ಪ್ರದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಭಾವ ಹೆಚ್ಚು. ಜತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಪ್ರಭಾವಳಿ ಹೊಂದಿ ರುವ ವಲಯ. ಇಷ್ಟು ಮಾತ್ರವಲ್ಲದೆ ದಲಿತ, ಒಬಿಸಿ ಮತ್ತು ಬುಡಕಟ್ಟು ಸಮುದಾಯದವರ ಪ್ರಮಾಣ ಶೇ.80ರಷ್ಟು ಇದೆ. ಬೆಲೆ ಏರಿಕೆ, ರೈತರ ಬೆಳೆಗೆ ಸಿಗದ ನಿರೀಕ್ಷಿತ ದರ ಈ ಬಾರಿ ಫ‌ಲಿತಾಂಶದ ಮೇಲೆ ಪ್ರಭಾವ ಬೀಳಲಿದೆ.

ಮರಾಠವಾಡ (46 ಕ್ಷೇತ್ರ): ಒಟ್ಟು 8 ಜಿಲ್ಲೆಗಳನ್ನು ಹೊಂದಿರುವ ಈ ಪ್ರದೇಶ ಮರಾಠಿ ಚಳುವಳಿಯ ಕೇಂದ್ರ ಸ್ಥಾನ. ಮರಾಠಿ ಭಾಷಿಕರನ್ನು ಒಬಿಸಿ ಸಮುದಾಯಕ್ಕೆ ಸೇರಿಸಬೇಕು ಎಂದು ಹೋರಾಟಗಾರ ಮನೋಜ್‌ ಜಾರಂಗೆ ಪ್ರತಿಭಟನೆ ಆರಂಭಿಸಿದ್ದೂ ಈ ಪ್ರದೇಶದಲ್ಲಿಯೇ. ಹೀಗಾಗಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಈ ಪ್ರದೇಶವನ್ನು ನಿಭಾಯಿಸುವುದೆಂದರೆ ಸವಾಲಿನ ಕೆಲಸವೇ. ಲೋಕಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ ಮಹಾಯುತಿಗೆ ಭಾರೀ ಹಿನ್ನೆಡೆಯಾಗಿದೆ.

ಥಾಣೆ- ಕೊಂಕಣ್‌ (39 ಕ್ಷೇತ್ರ): ನೀರೂರಿಸುವ ಅಲೊ#àನ್ಸೋ ಮಾವು, ಗೇರು ಬೆಳೆಗೆ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಶಿವಸೇನೆ ಮತ್ತು ಶಿವಸೇನೆ ನಡುವೆ ನೇರ ಹೋರಾಟ ಇದೆ. ಕಳೆದ ಬಾರಿ ಅವಿಭಜಿತ ಶಿವಸೇನೆ 15, ಬಿಜೆಪಿ 11 ಕ್ಷೇತ್ರಗಳಲ್ಲಿ ಗೆದ್ದಿತ್ತು. ಶಿವಸೇನೆ ವಿಭಜನೆಗೊಂಡ ಬಳಿಕ ಉದ್ಧವ್‌ ಬಣದ ಮುಖಂಡರು ಏಕನಾಥ ಶಿಂಧೆಯವರಿಗೆ ನಿಷ್ಠೆ ಪ್ರದರ್ಶಿಸಿದ್ದಾರೆ.

ಮುಂಬಯಿ (36 ಕ್ಷೇತ್ರ): 2019ರಲ್ಲಿ ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ಒಟ್ಟಾಗಿ ಇದ್ದಾಗ 22 ಕ್ಷೇತ್ರಗಳನ್ನು ಗೆದ್ದಿದ್ದವು. ಕಾಂಗ್ರೆಸ್‌ ಮತ್ತು ಎನ್‌ಸಿಪಿ 14 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆ ಬಳಿಕ, ಲೋಕಸಭೆ ಚುನಾವಣೆ ಬಳಿಕ ಚಿತ್ರಣ ಬದಲಾಗಿದೆ. ಎಂವಿಎ ಒಟ್ಟು 21 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಮಹಾಯುತಿ ಪ್ರಭಾವಳಿ ಕೇವಲ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ವ್ಯಕ್ತವಾಗಿದೆ.

ಬಟೇಂಗೆ ತೊ ಕಟೇಂಗೆ ವಿವಾದ
ನ.20ರ ಮತದಾನಕ್ಕೆ ಇನ್ನು ಹೆಚ್ಚು ದಿನಗಳಿಲ್ಲ. ಆಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ “ಬಟೇಂಗೆ ತೊ ಕಟೇಂಗೆ’ ಎಂಬ ಮಾತು ಎನ್‌ಡಿಎ ಮೈತ್ರಿ ಕೂಟದಲ್ಲಿಯೇ ತಕರಾರು ಸೃಷ್ಟಿಸಿತ್ತು. ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣದ ನಾಯಕ ಅಜಿತ್‌ ಪವಾರ್‌ ಅವರೇ “ಉತ್ತರ ಪ್ರದೇಶದ ಮಾತುಗಳು ನಮ್ಮಲ್ಲಿಗೆ ಅನ್ವಯವಾಗುವುದಿಲ್ಲ ಮತ್ತು ಈ ಉದ್ಘೋಷವನ್ನು ನಾವು ಬಳಕೆ ಮಾಡುವುದಿಲ್ಲ’ ಎಂದು ನೇರವಾಗಿಯೇ ಹೇಳಿದ್ದರೆ, ಮಹಾರಾಷ್ಟ್ರ ಬಿಜೆಪಿಯ ನಾಯಕರಾಗಿರುವ ಅಶೋಕ್‌ ಚವಾಣ್‌ ಮತ್ತು ಪಂಕಜಾ ಮುಂಢೆ ವಿರೋಧವಾಗಿರುವ ಧ್ವನಿಯಲ್ಲಿ ಮಾತಾಡಿದ್ದಾರೆ. ಬಿಜೆಪಿ ನಾಯಕ ಮತ್ತು ಡಿಸಿಎಂ ದೇವೇಂದ್ರ ಫ‌ಡ್ನವೀಸ್‌, “ಎಂವಿಎ ಪ್ರಚಾರಕ್ಕೆ ಅದು ತಿರುಗೇಟು’ ಎಂದರೂ ಅದು ತೃಪ್ತಿದಾಯಕ ಎಂದು ಅನಿಸಿಲ್ಲ ಎನ್ನುವುದು ಸ್ಪಷ್ಟ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ