ಬೆಳಗಾವಿ: ‘ಖಾನಾಪುರ ತಾಲ್ಲೂಕಿನ ಹಲಸಿ ಬಳಿ ವ್ಯಕ್ತಿಯೊಬ್ಬರು ಆಕಸ್ಮಿಕ ಗುಂಡಿನ ದಾಳಿಯಿಂದ ಮೃತಪಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಕಸ್ಮಿಕ ಗುಂಡಿನ ದಾಳಿಗೆ ಕಾರಣವಾದ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿರುವ ಪ್ರಕರಣವೂ ಕೊಲೆಗೆ ಸಮಾನವಾಗಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮತ್ತು ಆರೋಪಿಗಳು ನವಿಲುಗಳ ಬೇಟೆಯಾಡಿದ ಕಾರಣ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರವೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದರು.
‘ನವೆಂಬರ್ 11ರಂದು ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಹಲಸಿಯ ಅಲ್ತಾಫ್ ಮಕಾನದಾರ(30) ಮೃತಪಟ್ಟಿದ್ದಾರೆ. ಆರೋಪಿಗಳಾದ ಮಕ್ತುಮಸಾಬ್ ತಹಶೀಲ್ದಾರ, ಉಸ್ಮಾನಸಾಬ್ ತಹಶೀಲ್ದಾರ ಮತ್ತು ಅವರ ನೆರೆಹೊರೆಯವರು ಅಲ್ತಾಫ್ ಮೃತದೇಹವನ್ನು ಮನೆಗೆ ತಂದಿದ್ದರು. ಮಕ್ತುಮಸಾಬ್ ಮತ್ತು ಉಸ್ಮಾನಸಾಬ್ ಈ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅಲ್ತಾಫ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು.