ಹುಬ್ಬಳ್ಳಿ: ನಗರದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗುರುವಾರ ನಗರದ ವಿವಿಧೆಡೆ ನರಕ ಚತುರ್ದಶಿ ಹಾಗೂ ಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ಹಬ್ಬದ ಪ್ರಯುಕ್ತ ಬೆಳಿಗ್ಗೆಯೇ ಮನೆ ಎದುರು ಶುಚಿಗೊಳಿಸಿ ರಂಗೋಲಿ ಹಾಕಿ, ಬಾಗಿಲಿಗೆ ತಳಿರು ತೋರಣ ಕಟ್ಟಿದ್ದರು.
ಸಂಜೆ ಮನೆ ಮುಂದೆ, ತುಳಸಿಕಟ್ಟೆ ಎದುರು ದೀಪ ಹಚ್ಚಿ ಜನರು ಸಂಭ್ರಮಿಸಿದರು.
ಲಕ್ಷ್ಮಿ ಪೂಜೆ ಅಂಗವಾಗಿ ಕೆಲವು ವ್ಯಾಪಾರಿಗಳು ಅಂಗಡಿಗಳನ್ನು ಬಗೆಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಸಂಜೆ ವೇಳೆಗೆ ಪೂಜೆ ನೆರವೇರಿಸಿದರು. ಸ್ನೇಹಿತರು, ಬಂಧುಗಳು, ಆಪ್ತರನ್ನು ಕರೆದು ಸಿಹಿ ಹಂಚಿದರು. ಎರಡು ದಿನ ಅಮಾವಾಸ್ಯೆ ಇರುವುದರಿಂದ ಶುಕ್ರವಾರವೂ ಲಕ್ಷ್ಮಿ ಪೂಜೆ ಮಾಡಲು ಕೆಲವರು ಸಿದ್ಧತೆ ಕೈಗೊಂಡರು.
ಖರೀದಿ ಭರಾಟೆ; ಹಬ್ಬದ ಪ್ರಯುಕ್ತ ಗುರುವಾರವೂ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಕೊಪ್ಪಿಕರ ರಸ್ತೆ, ಸ್ಟೇಷನ್ ರಸ್ತೆ, ವೀರಾಪುರ ಓಣಿ, ಶಹಾ ಬಜಾರ್, ಸಿಬಿಟಿ, ಮರಾಠಗಲ್ಲಿ, ದಾಜೀಬಾನಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು.