ಚಿಕ್ಕೋಡಿ: ದೇವರ ಆಯುಧಗಳು ಎಂದರೆ, ಗದೆ, ಬಿಲ್ಲು, ಖಡ್ಗ, ತ್ರಿಶೂಲ, ಶಂಖ, ಚಕ್ರ ನೋಡಿರುತ್ತೀರಿ. ಆದರೆ, ಪಿಸ್ತೂಲ್ ಅನ್ನೇ ಆಯುಧವಾಗಿಸಿಕೊಂಡ ದೇವರನ್ನು ನೋಡಬೇಕಾದರೆ ತಾಲ್ಲೂಕಿನ ಜಾಗನೂರಿಗೆ ಬರಬೇಕು.
ಇಲ್ಲಿನ ಆಂಜನೇಯ ತನ್ನ ಸೊಂಟಕ್ಕೆ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬರುತ್ತದೆ.
ಜಾತ್ರೆ, ಉತ್ಸವ, ಹನುಮ ಜಯಂತಿ, ರಾಮನವಮಿ ಸೇರಿ ವಿಶೇಷ ಸಂದರ್ಭ ಹನುಮಾನ ದೇವರ ಮೂರ್ತಿ ಅಲಂಕರಿಸುವಾಗ, ಪಿಸ್ತೂಲ್ ಇರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ ನೆರವೇರಲಿರುವ ಹನುಮಾನ ದೇವರ ಜಾತ್ರೆಗೆ ಜಾಗನೂರ ಗ್ರಾಮ ಸಜ್ಜಾಗಿದೆ. ಆಂಜನೇಯನ ಸೊಂಟದಲ್ಲಿ ಪಿಸ್ತೂಲ್ ರಾರಾಜಿಸುತ್ತಿದೆ. ಜಾಗನೂರ ಹಾಗೂ ಸುತ್ತಲಿನ ಗ್ರಾಮಗಳಿಗೆ ‘ಜಾಗೃತ ದೇವಸ್ಥಾನ’ ಎಂದೇ ಇದು ಖ್ಯಾತಿ ಗಳಿಸಿದೆ.