ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಹಟ್ಟಿ ಮೂಲದವರಾದ, ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
1955ರ ಆಗಸ್ಟ್ 1ರಂದು ತವನಪ್ಪ ಹಾಗೂ ಸಂಕವ್ವ ದಂಪತಿ ಪುತ್ರರಾಗಿ ಬಾಳಾಸಾಹೇಬ ಜನಿಸಿದರು. ಬಾಗಲಕೋಟೆಯ ಎಸ್.ಸಕ್ರಿ ಪದವಿಪೂರ್ವ ಕಾಲೇಜಿನಲ್ಲಿ ಭೂಗೋಳ ವಿಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
8 ಕಥಾ ಸಂಕಲನಗಳು, 10 ಕಾದಂಬರಿಗಳು, 6 ವಿಮರ್ಶಾ ಕೃತಿಗಳು, ಎರಡು ಸಂಶೋಧನಾ ಗ್ರಂಥ, ಎರಡು ಸಂಪಾದನೆಗಳು, 5 ಇತರ ಕೃತಿಗಳು, 12 ಸಹ ಸಂಪಾದನೆಗಳು ಅವರ ಸಾಹಿತ್ಯ ಕೃಷಿಯಲ್ಲಿವೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗಡಿ ಭಾಗದವರಾಗಿ, ಬಾಳಾಸಾಹೇಬ ಅವರು ಕನ್ನಡ ನಾಡು- ನುಡಿಗೆ ಸಲ್ಲಿಸಿದ ಸೇವೆ ಅನುಪಮ. ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ಹಾಗೂ ‘ಜೈನ ಮಹಿಳೆ’ ಎಂಬ ಅವರ ಸಂಶೋಧನಾ ಕೃತಿಗಳು ಕನ್ನಡ ಸಾರಸ್ವತ ಲೋಕದ ಅಮೂಲ್ಯ ಕೊಡುಗೆಗಳಾಗಿವೆ.
ಪ್ರತಿಫಲನ, ಸಮುಚಿತ, ರಸಾಧಿಕ, ಹರಿವಾಣ, ಸುಮಿರಣ, ಫಸಲು ಎಂಬ ಆರು ವಿಮರ್ಶಾ ಕೃತಿಗಳಲ್ಲಿ ಅವರ ಸಾಹಿತ್ಯ ಸಂವೇದನೆಯ ಘಮಲು ವ್ಯಕ್ತವಾಗಿದೆ.