ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಭಾಗ್ಯಾ ಮಹೇಶ ಮುರಾಳ ಎನ್ನುವವರ ಮನೆಯ ಮುಂದೆ ಇದ್ದ ಭಾರಿ ಎತ್ತರದ ತೆಂಗಿನ ಮರ ಏರಿ ತೆಂಗಿನ ಕಾಯಿ ಮತ್ತು ಒಣಗಿದ ಗರಿ ಕೆಳಗೆ ಇಳಿಸುವಾಗ ಮೇಲಿಂದ ಜಾರಿ ನೆಲಕ್ಕೆ ಬಿದ್ದು 21 ವರ್ಷದ ಅವಿವಾಹಿತ ಯುವಕ ಸಂತೋಷ ಶರಣಪ್ಪ ವಾಲಿಕಾರ ಸಾವನ್ನಪ್ಪಿರುವ ಘಟನೆ ಬುಧವಾರ(ಅ.30) ನಡೆದಿದೆ.
ಸಂತೋಷ ನೆರಬೆಂಚಿ ಗ್ರಾಮದವನಾಗಿದ್ದು ತನ್ನೂರಲ್ಲೇ ಕುರಿ ಕಾಯುತ್ತಿದ್ದ. ತೆಂಗಿನ ಮರ ಸ್ವಚ್ಛಗೊಳಿಸಿದರೆ ಕೂಲಿ ಸಿಗುತ್ತದೆ ಎನ್ನುವ ಆಸೆಗೆ ಬಿದ್ದು ತನ್ನೂರಿನಿಂದ 10 ಕಿಮಿ ದೂರದಲ್ಲಿರುವ ಕವಡಿಮಟ್ಟಿಗೆ ಬಂದಿದ್ದ. 4-5 ಮನೆಗಳ ಮುಂದಿನ ತೆಂಗಿನ ಮರ ಸ್ವಚ್ಛಗೊಳಿಸಿದ್ದ ಈತ ಮುರಾಳ ಅವರ ಮನೆಯ ಮುಂದಿದ್ದ ಬಹಳಷ್ಟು ಎತ್ತರದ ಮರ ಏರಿದ್ದ. ಎಲ್ಲರೂ ನೋಡುತ್ತಿದ್ದಂತೆಯೇ ಅಂದಾಜು 50-60 ಅಡಿ ಎತ್ತರದಿಂದ ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾನೆ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.