ಧಾರವಾಡ: ತಾಲ್ಲೂಕಿನ ಉಪ್ಪಿನಬೆಟಗೇರಿಯ ಕೆಲವು ರೈತರ ಪಹಣಿಯಲ್ಲಿ ‘ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ನಮೂದಾಗಿರುವ ಕುರಿತು ಚರ್ಚಿಸಲು ನವೆಂಬರ್ 5ರಂದು ತಹಶೀಲ್ದಾರ್ ಕಚೇರಿಗೆ ಹಾಜರಾಗುವಂತೆ ರೈತರಿಗೆ ಮೌಖಿಕವಾಗಿ ತಿಳಿಸಲಾಗಿದೆ.
ಗ್ರಾಮ ಆಡಳಿತಾಧಿಕಾರಿ (ವಿಎ) ಚೈತನ್ಯ ಮಳಿಯೆ ಅವರು ಮಂಗಳವಾರ ರೈತರ ಮನೆಗಳಿಗೆ ತೆರಳಿ ಮಾಹಿತಿ ನೀಡಿದ್ದಾರೆ.
ಜಮೀನಿನ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಹಾಜರಾಗಲು ತಿಳಿಸಿದ್ಧಾರೆ.
‘ನಮ್ಮದು ಪಿತ್ರಾರ್ಜಿತ ಆಸ್ತಿ. ನಮ್ಮ ಜಮೀನಿನ ಪಹಣಿಯಲ್ಲಿ ‘ವಕ್ಫ್’ ಎಂದು ಯಾಕೆ ನಮೂದಾಗಿದೆ ಗೊತ್ತಿಲ್ಲ. ನ.5ರಂದು ದಾಖಲೆ ಪರಿಶೀಲನೆಗೆ ಹಾಜರಾಗಲು ವಿಎ ತಿಳಿಸಿದ್ಧಾರೆ’ ಎಂದು ಉಪ್ಪಿನಬೆಟಗೇರಿ ಗ್ರಾಮಸ್ಥ ಶ್ರೀಶೈಲ ಮಸೂತಿ ತಿಳಿಸಿದರು.
‘ನ.5ರಂದು ವಿಚಾರಣೆ ನಡೆಸಲಾಗುವುದು. ಉಪ್ಪಿನಬೆಟಗೇರಿಯ ನಾಲ್ಕು ಪಹಣಿಯಲ್ಲಿ (6 ರೈತರು) ‘ವಕ್ಫ್’ ಎಂದು ದಾಖಲಾಗಿರುವುದು ಕಂಡುಬಂದಿದೆ. ಎರಡೂ ಕಡೆಯವರ (ವಕ್ಫ್ ಅಧಿಕಾರಿ ಮತ್ತು ರೈತರು) ದಾಖಲೆಗಳನ್ನು ಪರಿಶೀಲಿಸಿ, ಸಮಸ್ಯೆ ಪರಿಹರಿಸಲಾಗುವುದು’ ಎಂದು ತಹಶೀಲ್ದಾರ್ ದೊಡ್ಡಪ್ಪ ಹೂಗಾರ ತಿಳಿಸಿದರು.
Laxmi News 24×7