ನವದೆಹಲಿ: ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿಗಳ ಮನೆಗಳನ್ನು ಜೆಸಿಬಿ ಮೂಲಕ(Bulldozer Action) ಧ್ವಂಸಗೊಳಿಸುವ ನಿರ್ಧಾರದ ಕುರಿತಂತೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್(Supreme court) ಮಂಗಳವಾರ (ಅ.22) ಪರೋಕ್ಷ ಎಚ್ಚರಿಕೆಯ ಸಂದೇಶ ನೀಡಿದೆ.
ಆರೋಪಿಯ ಮನೆಯನ್ನು ಒಡೆಯುವ ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದು ರಾಜ್ಯ ಸರ್ಕಾರದ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲು ಬಯಸುವುದಾದರೆ ಆಯ್ಕೆ ನಿಮ್ಮದು (ಸರ್ಕಾರ) ಎಂದು ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಬಿ.ಆರ್.ಗವಾಯಿ ಮತ್ತು ಜಸ್ಟೀಸ್ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ವಿಚಾರಣೆಯನ್ನು ಬುಧವಾರ(ಅ.23)ಕ್ಕೆ ಮುಂದೂಡಿದ್ದು, ಉತ್ತರಪ್ರದೇಶ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆ ನೀಡಿರುವುದಾಗಿ ತಿಳಿಸಿದೆ.
ಎಎನ್ ಐ ವರದಿ ಪ್ರಕಾರ, ಬಹ್ರೈಚ್ ನಲ್ಲಿ ಅಕ್ಟೋಬರ್ 13ರಂದು ನಡೆದಿದ್ದ ಗಲಭೆಯಲ್ಲಿ ಶಾಮೀಲಾಗಿದ್ದ ಆರೋಪಿಗಳ ಮನೆಗಳನ್ನು ನಾಳೆಯವರೆಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ಸುಪ್ರೀಂಗೆ ತಿಳಿಸಿದ್ದಾರೆ.