ಧಾರವಾಡ: ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಸಾಂಸ್ಕೃತಿಕ ನಗರವೆಂದು ಕರೆಯುವ ಧಾರವಾಡದಲ್ಲಿ ಈಗ ಕೆಲವೇ ರಂಗಮಂದಿರಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ.
ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗಳಿಂದ ನಲುಗಿರುವ ರಂಗತಾಣಗಳಿಗೆ ಕಾಯಕಲ್ಪಿಸಲು ಸಂಬಂಧಪಟ್ಟವರು ಕ್ರಮವಹಿಸಿಲ್ಲ.
ಧಾರವಾಡದಲ್ಲಿ ರಂಗಾಯಣ ಇದ್ದರೂ ಅನುದಾನ ಕೊರತೆ, ಸವಲತ್ತುಗಳ ಕೊರತೆಯಿಂದಾಗಿ ರಂಗಚಟುವಟಿಕೆಗಳು ಸೊರಗಿವೆ. ಬಹುತೇಕ ರಂಗಮಂದಿರಗಳಲ್ಲಿ ಬೆಳಕು, ಧ್ವನಿ ವ್ಯವಸ್ಥೆ ಸಹಿತ ಸುಸಜ್ಜಿತ ಸಕಲ ಸೌಕರ್ಯಗಳು ಇಲ್ಲ.
ಇದ್ದೂ ಇಲ್ಲದಂತಾದ ಕಲಾಭವನ:
ಕಡಪಾ ಮೈದಾನದಲ್ಲಿನ ಡಾ.ಮಲ್ಲಿಕಾರ್ಜುನ ಮನ್ಸೂರ ಕಲಾಭವನ ದುಃಸ್ಥಿತಿಯಲ್ಲಿದೆ. ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡ ಇದ್ದೂ ಇಲ್ಲದಂತಾಗಿದೆ. ಈ ಕಟ್ಟಡದ ಒಂದು ಪಾರ್ಶ್ವದಲ್ಲಿ ಪಾಲಿಕೆಯ ವಲಯ-12 ಕಚೇರಿ ಇದೆ.
ಕಲಾ ಭವನದಲ್ಲಿ ಕಾರ್ಯಚಟುವಟಿಕೆಗಳು ಸ್ಥಗಿತವಾಗಿ ದಶಕ ಕಳೆದರೂ ಈವರೆಗೆ ಕಾಯಕಲ್ಪ ಕಲ್ಪಿಸಿಲ್ಲ. ಧಾರವಾಡದಲ್ಲಿ ಪಾಲಿಕೆ ಕಚೇರಿ ಪಕ್ಕದಲ್ಲೇ ಕಲಾ ಭವನ ಇದೆ. ಭವನದ ಒಳಗೆ ಮತ್ತು ಹೊರಗೆ ಪ್ಲಾಸ್ಟಿಕ್ ಪೊಟ್ಟಣ, ಕಸ ಬಿದ್ದಿದೆ. ಕಟ್ಟಡದ ಗೋಡೆಗಳ ಮಗ್ಗುಲಿನ ಜಾಗ, ಪ್ರವೇಶ ದ್ವಾರದ ಮೆಟ್ಟಿಲುಗಳಲ್ಲಿ ಬೀಡಾಡಿ ಜಾನುವಾರುಗಳು ಇರುತ್ತವೆ. ಕಟ್ಟಡ ಪ್ರದೇಶವು ಅಕ್ರಮ ಚಟುವಟಿಕೆಗಳ (ಮದ್ಯ ಸೇವನೆ, ಧೂಮಪಾನ…) ತಾಣವಾಗಿದೆ.
ಮದ್ಯ ಸೇವಿಸಿ ಕೆಲವರು ಕಟ್ಟಡದ ಬಾಗಿಲ ಮುಂಭಾಗದಲ್ಲೇ ಪವಡಿಸಿರುತ್ತಾರೆ. ಭವನದ ಆವರಣದಲ್ಲಿ ವಸ್ತು ಪ್ರದರ್ಶನ-ಮಾರಾಟ ಮೇಳಗಳು ನಡೆಯುತ್ತವೆ. ಪಾಲಿಕೆಯ ಕಸ ಸಂಗ್ರಹ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ