ಬೆಂಗಳೂರು, ನ.29- ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಸ್ತ್ರ ಪ್ರಯೋಗ ಮಾಡಿದ ಯಡಿಯೂರಪ್ಪ ಅವರ ರಾಜತಾಂತ್ರಿಕತೆ ಕಂಡು ಬಿಜೆಪಿ ಹೈಕಮಾಂಡ್ ಬೆಚ್ಚಿ ಬಿದ್ದಿದೆ. ಬಿ.ಎಸ್.ವೈ ನಾಯಕತ್ವ ಬದಲಾವಣೆಯ ತಯಾರಿಯಲ್ಲಿದ್ದ ಬಿಜೆಪಿ ಹೈ ಕಮಾಂಡ್ಗೆ ಒಬಿಸಿ ವಿಚಾರ ಬಿಸಿ ತುಪ್ಪ ಎಂಬ ವಾಸ್ತವತೆ ಅರಿವಾಗಿದೆ. ಆ ಮೂಲಕ ಯಡಿಯೂರಪ್ಪ ಪ್ರಬಲ ಸಮುದಾಯದ ಸಂಪೂರ್ಣ ವಿಶ್ವಾಸ ಗಳಿಸಲಿದ್ದಾರೆ ಎಂಬ ಅಂಶ ಬಿಜೆಪಿ ವರಿಷ್ಠರಿ ಮನವರಿಕೆಯಾಗಿದೆ.
ನಾಯಕತ್ವ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ಹೈ ಕಮಾಂಡ್ಗೆ ಯಡಿಯೂರಪ್ಪರ ಈ ನಡೆ ಎಷ್ಟು ದುಬಾರಿ ಎಂಬ ವಾಸ್ತವತೆ ಅರಿವಾಗಿದೆ. ಇದೇ ಹಿನ್ನೆಲೆಯಲ್ಲಿ ಬಿಎಸ್ವೈಗೆ ಒಬಿಸಿ ಪ್ಲಾನ್ಅನ್ನು ಸದ್ಯಕ್ಕೆ ಕೈ ಬಿಡುವಂತೆ ಸೂಚಿಸಿದ್ದಲ್ಲದೆ, ದೆಹಲಿಗೆ ಬರುವಂತೆ ಸಲಹೆ ನೀಡಿದೆ.
ಒಬಿಸಿ ಮೀಸಲಾತಿಯಿಂದ ಬಿಎಸ್ವೈ ಪ್ರಬಲ ಸಮುದಾಯದ ಅನುಕಂಪ, ಬೆಂಬಲ, ವಿಶ್ವಾಸಗಳಿಸುವ ಆತಂಕ ಹೈ ಕಮಾಂಡ್ನ್ನು ಬಹುವಾಗಿ ಕಾಡಿದೆ. ವೀರಶೈವ-ಲಿಂಗಾಯತ ಸಮುದಾಯವೇ ಯಡಿಯೂರಪ್ಪರ ಬೆನ್ನಿಗೆ ನಿಲ್ಲಲಿದ್ದು, ಆಗ ನಾಯಕತ್ವ ಬದಲಾವಣೆ ಬಹುತೇಕ ಕಷ್ಟ ಸಾಧ್ಯ ಎಂಬ ಕಟುಸತ್ಯ ಹೈ ಕಮಾಂಡ್ಗೆ ಮನವರಿಕೆಯಾಗಿದೆ.
ಒಂದು ವೇಳೆ ಯಡಿಯೂರಪ್ಪರನ್ನು ಬದಲಾಯಿಸಿದರೆ, ಇಡೀ ಸಮುದಾಯಕ್ಕೆ ಬಿಜೆಪಿ ವಿರುದ್ಧ ತಪ್ಪು ಸಂದೇಶ ರವಾನೆಯಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಏಟು ಬೀಳಲಿದೆ ಎಂಬ ಭೀತಿ ಹೈ ಕಮಾಂಡ್ಗೆ ಎದುರಾಗಿದೆ.
ಸಮುದಾಯದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ ಬಳಿಕ ಯಡಿಯೂರಪ್ಪರನ್ನು ಮುಟ್ಟುವುದು ಕಷ್ಟ ಎಂಬ ಕಟುಸತ್ಯ ಹೈ ಕಮಾಂಡ್ಗೆ ಅರಿವಾಗಿತ್ತು. ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ವೀರಶೈವ-ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡರೆ ಸೋಲು ಖಚಿತ ಎಂಬ ವಾಸ್ತವಾಂಶ ಬಿಜೆಪಿ ವರಿಷ್ಠರಿಗೆ ಇತ್ತು.
ಹೀಗಾಗಿ ಒಂದು ವೇಳೆ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರೂ ಬಿಎಸ್ವೈ ಪರ ವಾಲುವ ಬೃಹತ್ ಸಮುದಾಯದ ಮತ ಕ್ರೋಢೀಕರಣದ ವಾಸ್ತವತೆಯೇ ಹೈ ಕಮಾಂಡ್ನ್ನು ಆತಂಕಕ್ಕೀಡು ಮಾಡಿತ್ತು.
ಏಕಾಏಕಿ ಬಿಎಸ್ವೈ ಅವರ ಒಬಿಸಿ ಪಂಚ್ ಬಿಜೆಪಿ ಹೈ ಕಮಾಂಡನ್ನೇ ಬೆಸ್ತು ಬೀಳಿಸುವಂತೆ ಮಾಡಿತು. ಒಬಿಸಿ ಶಿಫಾರಸಿನ ಹಿಂದಿನ ಮರ್ಮ ಅರಿತ ಹೈ ಕಮಾಂಡ್ ಕೂಡಲೇ ಯಡಿಯೂರಪ್ಪರ ಒಬಿಸಿ ಮೀಸಲಾತಿ ಓಟಕ್ಕೆ ಬ್ರೇಕ್ ಹಾಕಿದೆ.
ನಿಗಮ ಮಂಡಳಿಗಳ ನೇಮಕಾತಿ ಮೂಲಕ ಹೈ ಕಮಾಂಡ್ಗೆ ಸ್ಟ್ರಾಂಗ್ ಮೆಸೇಜ್ ಕಳುಹಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ-ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಶಿಫಾರಸು ಮಾಡಲು ಮುಂದಾಗುವ ಮೂಲಕ ಬಿಜೆಪಿ ವರಿಷ್ಠರಿಗೆ ದೊಡ್ಡ ಆಘಾತವನ್ನೇ ನೀಡಿದ್ದಾರೆ.
ಸಂಪುಟ ಸಭೆಯ ಅಜೆಂಡಾದಲ್ಲಿ ಒಬಿಸಿ ವಿಷಯವನ್ನು ಸೇರಿಸುವ ಮೂಲಕ ಯಡಿಯೂರಪ್ಪ ಹೈ ಕಮಾಂಡ್ಗೆ ಮುಟ್ಟಿಸಬೇಕಾಗಿದ್ದ ಸಂದೇಶವನ್ನು ಕಳುಹಿಸಿದ್ದರು. ನಾಯಕತ್ವ ಬದಲಾವಣೆಯ ಚರ್ಚೆ, ಇನ್ನೊಂದೆಡೆ ಸಂಪುಟ ವಿಸ್ತರಣೆಯ ಸಂಕಟದಿಂದ ಪಾರಾಗಲು ಯಡಿಯೂರಪ್ಪ ಪ್ರಬಲ ಸಮುದಾಯವನ್ನು ಮುಂದಿಟ್ಟುಕೊಂಡು ರಾಜಕೀಯ ರಣತಂತ್ರ ರೂಪಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.
ಈ ರಾಜಕೀಯ ರಣತಂತ್ರಕ್ಕೆ ಬಿಜೆಪಿ ಹೈ ಕಮಾಂಡ್ ಕೂಡ ಬೆದರಿ ಹೋಗಿತ್ತು. ಅದಕ್ಕಾಗಿಯೇ ಅಮಿತ್ ಶಾ ಕೂಡಲೇ ಕರೆ ಮಾಡಿ ಒಬಿಸಿ ಅಜೆಂಡಾವನ್ನು ಕೈ ಬಿಟ್ಟು, ದೆಹಲಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ಒಬಿಸಿ ವಿಷಯವನ್ನು ಮುಂದೂಡಲಾಯಿತು.