ಬೆಂಗಳೂರು, ಸೆಪ್ಟೆಂಬರ್ 26: ಮೈಸೂರಿನ ಮುಡಾದಿಂದ ಎರಡು ಸೈಟ್ ಪಡೆಯಬೇಕಾದ ಜಾಗದಲ್ಲಿ ನೀವು (ಮುಖ್ಯಮಂತ್ರಿಗಳ ಕುಟುಂಬ) 14 ಸೈಟ್ ಪಡೆದುದೇಕೆ ಎಂದು ಹೈಕೋರ್ಟ್ ಪ್ರಸ್ತಾಪಿಸಿದೆ. ಹೀಗಾಗಿ ಗವರ್ನರ್ ಅವರು ತನಿಖೆಗೆ ಕೊಟ್ಟ ಆದೇಶ ಸರಿ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಾಧ್ಯಮಗಳ ಜೊತೆಗೆ ಬುಧವಾರ ಮಾತನಾಡಿ, ಹೈಕೋರ್ಟ್ ಆದೇಶವನ್ನು ಗಮನಿಸಿದ್ದೇವೆ. ಗವರ್ನರ್ ಅವರ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ ಎಂದರು. ಮಾನ್ಯ ಮುಖ್ಯಮಂತ್ರಿಗಳೂ ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ; ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ ಎಂದು ವಿವರಿಸಿದರು.
ಕೋರ್ಟ್ ಆದೇಶ ಬಂದ ಬಳಿಕ ತನಿಖೆಗೆ ಸಿದ್ಧ ಎನ್ನುವುದು ಅಪಾರ್ಥ. ಆದೇಶ ಬಂದ ಬಳಿಕ ಸಿದ್ಧನಿಲ್ಲ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು. ನನ್ನ ಪ್ರಕಾರ ನಿನ್ನೆಯ ಆದೇಶಕ್ಕೂ ಇವತ್ತಿನ ಜನಪ್ರತಿನಿಧಿ ವಿಶೇಷ ಕೋರ್ಟಿನ ಆದೇಶಕ್ಕೂ ಬಹಳ ವ್ಯತ್ಯಾಸವಿದೆ. ಇವತ್ತಿನ ಆದೇಶದಲ್ಲಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 3 ತಿಂಗಳಿನಲ್ಲಿ ವರದಿ ಕೊಡಲು ತಿಳಿಸಿದ್ದಾರೆ. ಕೋರ್ಟ್ ಹೆಚ್ಚು ಕಡಿಮೆ ಶೇ 70-75 ಭಾಗದಷ್ಟು ತನಿಖೆಯನ್ನು ಮುಗಿಸಿದೆ. ಲೋಕಾಯುಕ್ತಕ್ಕೆ ಕೇವಲ ಶೇ 25ರಷ್ಟು ತನಿಖೆ ಬಾಕಿ ಇದೆ ಎಂದರು.1992ರಲ್ಲಿ ಮುಡಾ ಈ ಜಮೀನನ್ನು ಸ್ವಾಧೀನಪಡಿಸಿಕೊಂಡ ಬಳಿಕ 1996ರಲ್ಲಿ ಅದಕ್ಕೆ ಪರಿಹಾರವನ್ನೂ ಕೊಟ್ಟಿತ್ತು. 1998ರಲ್ಲಿ ಇದರ ಡಿನೋಟಿಫಿಕೇಶನ್ ಆಗಿದೆ. ಆ ಡಿನೋಟಿಫಿಕೇಶನ್ನಲ್ಲೇ ತಪ್ಪಿದೆ. ಅಲ್ಲಿಂದೀಚೆಗೆ ನಡೆದ ಎಲ್ಲ ವ್ಯವಹಾರಗಳೂ ತಪ್ಪಾಗಿವೆ ಎಂದು ನುಡಿದರು. ಮುಖ್ಯಮಂತ್ರಿಗಳು ತಡ ಮಾಡದೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
Laxmi News 24×7