ನವಲಗುಂದ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉದಯ ಶ್ರೀಧರ ಅವರ 5 ಎಕರೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ನವಲಗುಂದ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಧಾರವಾಡದ ರಾಜೀವ್ ಗಾಂಧಿ ನಗರದ ಪರಶುರಾಮ ರಂಗರಾವ ನಾಡಕರಣಿ ಹಾಗೂ ಮೊರಬದ ದಸ್ತು ಬರಹಗಾರ ಎಂ.ಪಿ.ಅಜಗೊಂಡ ಬಂಧಿತರು.
ಆರೋಪಿಗಳು ಉದಯ ಶ್ರೀಧರ ತಂದೆ ನಾರಾಯಣ ಮುಳಗುಂದ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಗುಮ್ಮಗೊಳ ಗ್ರಾಮದ ಸರ್ವೆ ಸಂಖ್ಯೆ 255/8ರಲ್ಲಿನ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಉದಯ ಶ್ರೀಧರ ಅವರು ಜುಲೈನಲ್ಲಿ ನವಲಗುಂದ ಠಾಣೆಗೆ ದೂರು ನೀಡಿದ್ದರು.
ಆರೋಪಿ ಪರಶುರಾಮ, ಎಂ.ಪಿ.ಅಜಗೊಂಡ ಮೂಲಕ ಖರೀದಿ ಪತ್ರ ತಯಾರಿಸಿ, ನವಲಗುಂದ ಉಪ ನೋಂದಣಿ ಕಚೇರಿಯಲ್ಲಿ ಬಸವರಾಜ ತಂದೆ ನಿಂಗಪ್ಪ ದಿವಟಗಿ ಅವರಿಗೆ ಖರಿದಿ ಪತ್ರ ನೋಂದಣಿ ಮಾಡಿಸಿದ್ದ. ಅದಕ್ಕೆ ಮೌಲಾಸಾಬ ಅಲಿಯಾಸ್ ಅಲ್ಲಾಬಕ್ಷ ಮತ್ತು ಮಾರುತಿ ಅವರನ್ನು ಸಾಕ್ಷಿದಾರರನ್ನಾಗಿ ಮಾಡಿ ಸಹಿ ಹಾಕಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪಿಎಸ್ಐ ಜನಾರ್ಧನ ಭಟ್ರಳ್ಳಿ ಹಾಗೂ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ಧಾರೆ.