ಜುಗೂಳ(ಬೆಳಗಾವಿ ಜಿಲ್ಲೆ): ‘ಪ್ರವಾಹದಾಗ ಕೃಷ್ಣಾ ನದಿ ಉಕ್ಕಿ ಹರಿತಿರ್ತೇತಿ. ನೀರಿನ ಸೆಳವಿಗೆ ಸಿಕ್ಕು, ಒಮ್ಮಿಂದೊಮ್ಮೆ ದೋಣಿ ಅಲುಗಾಡಿದಂಗ್ ಆಗ್ತೇತಿ. ಒಂದು ವೇಳೆ ದೋಣಿ ಪಲ್ಟಿ ಆದ್ರ, ಗಂಡ್ಮಕ್ಳು ಹೆಂಗೋ ಈಜ್ಕೊಂತ ದಡ ಸೇರ್ತಿವಿ. ಆದ್ರ ಹೆಣ್ಮಕ್ಳು ಮತ್ತು ವಯಸ್ಸಾದಾವ್ರ ಇದ್ರ, ಅವರ ಕತಿ ಏನ್ರೀ…’
ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಸ್ಥ ದಯಾನಂದ ಮಿಣಚೆ ಅವರು ಸಂಕಷ್ಟ ತೋಡಿಕೊಂಡಿದ್ದು ಹೀಗೆ. ಜುಗೂಳ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಖಿದ್ರಾಪುರ ಅಕ್ಕಪಕ್ಕದಲ್ಲಿವೆ. ಒಂದು ಬದಿಯಿಂದ ಇನ್ನೊಂದು ಬದಿ ಹೋಗಲು 2 ಕಿ.ಮೀ ಅಂತರವಿದೆ. ಎರಡೂ ಕಡೆಯ ಗ್ರಾಮಸ್ಥರಿಗೆ ದೋಣಿಯೇ ಆಸರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಸ್ಥರು ದೋಣಿಯಲ್ಲಿ ಸಾಗುತ್ತಿರುವುದು -ಪ್ರಜಾವಾಣಿ ಚಿತ್ರ: ವಿಜಯಮಹಾಂತೇಶ ಅರಕೇರಿ‘ಜುಗೂಳದಿಂದ ಖಿದ್ರಾಪುರಕ್ಕೆ ಹೋಗಲು ನೇರ ರಸ್ತೆ ಸಂಪರ್ಕವಿಲ್ಲ. ರಾಜಾಪುರ ಬ್ಯಾರೇಜ್ ಮಾರ್ಗವಾಗಿ 8 ಕಿ.ಮೀ ಸಂಚರಿಸಿ, ಖಿದ್ರಾಪುರ ತಲುಪಬಹುದು. ಮಳೆಗಾಲದಲ್ಲಿ ಆ ಬ್ಯಾರೇಜ್ ಮುಳುಗುವುದರಿಂದ 40 ಕಿ.ಮೀ ಸುತ್ತು ಬಳಸಿ ಸಂಚರಿಸುವುದು ಅನಿವಾರ್ಯ. ಕೃಷಿ ಕೆಲಸ, ದೇವರ ದರ್ಶನ ಅಲ್ಲದೇ ಬೇರೆ ಬೇರೆ ಕೆಲಸಕ್ಕೆ ನಾವು ಖಿದ್ರಾಪುರಕ್ಕೆ ಹೋಗುತ್ತೇವೆ. ಆದರೆ, ದೋಣಿ ಹೊರತುಪಡಿಸಿ ಬೇರೆ ಮಾರ್ಗವಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.