ಚಿಕ್ಕೋಡಿ: ಮಹಾ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ,ಉಪ ನದಿಗಳು ಭೋರ್ಗರೆಯುತ್ತಿವೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ಹಾಗೂ ನದಿಗಳಿಗೆ ನಿರ್ಮಿಸಿದ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ವಾಯುಭಾರ ಕುಸಿತದಿಂದ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮತ್ತೆ ಮಳೆಯಾದಲ್ಲಿ ಉಪ ವಿಭಾಗದ ನದಿ ತೀರದ ಗ್ರಾಮಗಳ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಲಿದೆ.
ಮಹಾರಾಷ್ಟ್ರದ ಕೊಂಕಣದಲ್ಲಿ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಮಳೆ ಬೀಳುತ್ತಿದೆ. ಚಿಕ್ಕೋಡಿ ಉಪವಿಭಾಗದದಲ್ಲಿ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ಗೂ ಹೆಚ್ಚು ನೀರು ಹರಿದು ಜನರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ನವಜಾ, ವಾರಣಾ, ಕೊಯ್ನಾ, ಧೂಮ, ಕಾಳಮ್ಮವಾಡಿ, ರಾಧಾನಗರಿ, ಮಹಾಬಳೇಶ್ವರ ಮುಂತಾದ ಪ್ರದೇಶಗಳಲ್ಲಿ ಕಳೆದ 15-20 ದಿನಗಳಿಂದ 15 ಸೆ.ಮೀ ನಿಂದ 30 ಸೆ.ಮೀ ವರೆಗೆ ಮಳೆ ಬಿದ್ದ ದಾಖಲೆಯಿದೆ.
ಭಾರೀ ಮಳೆಯಿಂದ ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ, ರಾಧಾನಗರಿ, ವಾರಣಾ, ಕಣೇರ ಜಲಾಶಯಗಳು ಭಾಗಶಃ ಭರ್ತಿಯಾಗಿವೆ. ಒಂದಡೆ ಮಳೆ ನೀರು, ಮತ್ತೊಂದೆಡೆ ಅಣೆಕಟ್ಟೆಯಿಂದ ಬಿಡುವ ನೀರಿನಿಂದ ಚಿಕ್ಕೋಡಿ ಉಪ ವಿಭಾಗದ ಜನರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.