ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಮಳೆ ಅಬ್ಬರ ತಗ್ಗಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಇದೆ. ಹೀಗಾಗಿ ಕೃಷ್ಣಾ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಿದೆ. 44 ಸೇತುವೆಗಳು ಮುಳುಗಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 2.45 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ದೂಧಗಂಗಾ ನದಿಯಿಂದ 48,570 ಕ್ಯುಸೆಕ್ ಸೇರಿ 2.93 ಲಕ್ಷ ಕ್ಯುಸೆಕ್ಗೂ ಅಧಿಕ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ನಲ್ಲಿ ಹರಿಯುತ್ತಿದೆ. ನವೀಲುತೀರ್ಥ ಅಣೆಕಟ್ಟೆಯಿಂದ 5 ಸಾವಿರ ಕ್ಯುಸೆಕ್ ನೀರು ನಿರಂತರವಾಗಿ ಮಲಪ್ರಭಾ ನದಿಗೆ ಹರಿಯುತ್ತಿದೆ. ರಾಮದುರ್ಗ ಸಮೀಪದ ಹಳೆ ಸೇತುವೆ ಮುಳುಗಡೆಯಾಗಿದೆ.
ಮೂಡಲಗಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಚಾವಣಿಯವರೆಗೆ ಇದ್ದ ನೀರು ತುಸು ಕಡಿಮೆಯಾಗಿದೆ. ಮಠಾಧೀಶರು ಹಾಗೂ ಅವರ ಶಿಷ್ಯರು ಮೇಲಂತಸ್ತಿನ ಎತ್ತರದ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಾರೆ.