ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿನ ನಾರಾಯಣ ಸೋಪಾದಲ್ಲಿರುವ ಮಹಾನಗರ ಪಾಲಿಕೆಯ ವ್ಯಾಯಾಮ ಶಾಲೆ ಕಟ್ಟಡವು ಸಂಪೂರ್ಣವಾಗಿ ಶಿಥಿಲವಾಗಿದ್ದು, ಇಡೀ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ.
ಅರವಿಂದ ನಗರದ ಸೇರಿದಂತೆ ಚೆನ್ನಪೇಟೆ, ನಾರಾಯಣ ಸೋಪಾ, ಪಾಂಡುರಂಗ ಕಾಲೊನಿಯ ಯುವಕರ ವ್ಯಾಯಾಮಕ್ಕೆ ಅನುಕೂಲವಾಗಲಿ ಎಂದು 40 ವರ್ಷಗಳ ಹಿಂದೆ 50X50 ಅಳತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ವ್ಯಾಯಾಮ ಶಾಲೆ ಕಟ್ಟಡ ನಿರ್ಮಿಸಲಾಗಿತ್ತು.
ಕಟ್ಟಡವು ಕ್ರಮೇಣ ಶಿಥಿಲ ಹಂತ ತಲುಪಿದಂತೆ, ನಿರ್ವಹಣೆ ಇಲ್ಲದೇ ಪಾಳು ಬಿದ್ದಿತು. ಕಟ್ಟಡದ ನಾಲ್ಕೂ ಪಿಲ್ಲರ್ಗಳ ತಳಭಾಗದ ಸಿಮೆಂಟ್ ಕಳಚಿ ಬಿದ್ದಿದ್ದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಹೊರಗೆ ಬಂದಿವೆ. ಕಟ್ಟಡವು ಬೀಳುವ ಸ್ಥಿತಿಯಲ್ಲಿದೆ.
ತ್ಯಾಜ್ಯದ ಗುಂಡಿ:
ವ್ಯಾಯಾಮ ಶಾಲೆಯಲ್ಲಿ ಯಾವುದೇ ಪರಿಕರಗಳಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಬಾಗಿಲು ಮುಚ್ಚಿದೆ. ಇದೀಗ ಇಡೀ ಕಟ್ಟಡವು ಹಳೆ ಕಟ್ಟಡಗಳ ಅವಶೇಷ, ಸುತ್ತಮುತ್ತಲಿನ ಮನೆಗಳ ತ್ಯಾಜ್ಯ ಹಾಗೂ ಶೌಚ ಗುಂಡಿಯಾಗಿ ಪರಿವರ್ತನೆಯಾಗಿದೆ.
ವ್ಯಾಯಾಮ ಶಾಲೆಯು ಹಿಂದೆ ಚೆನ್ನಾಗಿತ್ತು. ಸುತ್ತಮುತ್ತಲಿನ ಭಾಗದ 20ಕ್ಕೂ ಹೆಚ್ಚು ಯುವಕರು ನಿತ್ಯ ಬೆಳಿಗ್ಗೆ, ಸಂಜೆ ಇಲ್ಲಿ ವ್ಯಾಯಾಮ ಮಾಡುತ್ತಿದ್ದರು. ಸರಿಯಾದ ನಿರ್ವಹಣೆ ಇಲ್ಲದೆ ಶಾಲೆ ಬಾಗಿಲು ಮುಚ್ಚಿತು. ಕ್ರಮೇಣ ವ್ಯಾಯಾಮದ ಕಬ್ಬಿಣದ ಪರಿಕರಗಳು ಕಳವಾದವು. ಹುಡುಗರು ಇಲ್ಲಿಗೆ ಬರುವುದನ್ನೇ ನಿಲ್ಲಿಸಿದರು. ಇದರಿಂದಾಗಿ ಇಡೀ ಕಟ್ಟಡವು ಪಾಳು ಬಿದ್ದಿತು. ಇವಾಗ ಕಟ್ಟಡ ಪಿಲ್ಲರ್ಗಳ ತಳಭಾಗವು ಮಳೆ ನೀರು, ಸುತ್ತಮುತ್ತಲಿನ ಮನೆಗಳ ಶೌಚ ನೀರಿನಿಂದ ಸಂಪೂರ್ಣವಾಗಿ ಹಾಳಾಗಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಯಾವ ಸಮಯದಲ್ಲಾದರೂ ಬೀಳುವ ಸ್ಥಿತಿಯಿದೆ’ ಎಂದು ನಾರಾಯಣ ಸೋಪಾದ ನಿವಾಸಿ ಸಂಜಯ್ ಬೂತೆ ಆತಂಕ ವ್ಯಕ್ತಪಡಿಸಿದರು.