ಹಾವೇರಿ : ನಾನು ರಾಜಕೀಯವಾಗಿ ಬೆಳೆಯಲು ಶಿಗ್ಗಾವಿ ಜನರ ಆಶೀರ್ವಾದ ಕಾರಣ, ಜುಲೈ 12 ರಿಂದ ಒಂದುವರೆ ತಿಂಗಳುಗಳ ಕಾಲ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ಯಾತ್ರೆ ಆರಂಭ ಮಾಡುತ್ತೇನೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಶಿಗ್ಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ’ ಶಿಗ್ಗಾವಿ ಉಪಚುನಾವಣೆ ವಿಚಾರ ಅಶೋಕ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ.
ಪಕ್ಷದಿಂದ ಸರ್ವೆ ಮಾಡಿಸುತ್ತಿದ್ದೇವೆ. ಶಿಗ್ಗಾವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ’ ಎಂದು ತಿಳಿಸಿದರು.
‘ ರಾಜ್ಯ ಸರಕಾರ ದಿವಾಳಿ ಆಗಿರೋದು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಜನಹಿತ ಮುಖ್ಯವಲ್ಲ. ಎಸ್ ಸಿ, ಎಸ್ ಟಿಯವರ ಹಣ ಗ್ಯಾರಂಟಿ ಯೋಜನೆಗಳಿಗೆ 14 ಸಾವಿರ ಕೋಟಿ ವರ್ಗಾವಣೆ ಮಾಡಿದ್ದಾರೆ.ಎಸ್ ಸಿ ಎಸ್ ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ಎಸ್ ಸಿ ಎಸ್ ಟಿ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ. ಹಣ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ.ರಾಜಕಾರಣಕ್ಕಾಗಿ, ವೋಟಿಗಾಗಿ ದುರ್ಬಳಕೆ ಆಗುತ್ತಿದೆ. 25 ಸಾವಿರ ಕೋಟಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾ ಹೇಳುವವರು ಹಿಂದುಳಿದ ವರ್ಗಗಳಿಗೆ ಕಡಿಮೆ ಹಣ ಇಟ್ಟಿದ್ದಾರೆ. ಖಜಾನೆ ಸುಭದ್ರವಾಗಿದೆ ಅನ್ನುತ್ತೀರಿ ಆದರೆ ಎಸ್ ಸಿ, ಎಸ್ ಟಿಯವರ ಜೇಬಿಗೆ ಯಾಕೆ ಕೈ ಹಾಕಿದ್ದೀರಿ ಎಂದು ಕಿಡಿ ಕಾರಿದರು.