ಖಾನಾಪುರ: ತಾಲ್ಲೂಕಿನಲ್ಲಿ ಗುರುವಾರ ಒಂದೇ ದಿನ 74.5 ಸೆ.ಮೀ ಮಳೆಯಾಗಿದೆ. ‘ಇದು ಈ ವರ್ಷದಲ್ಲಿ ಸುರಿದ ಅತ್ಯಧಿಕ ಮಳೆ’ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಪ್ರಮಾಣ ವೃದ್ಧಿಸಿದೆ.
ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಬೈಲ್, ಕುಂಬಾರ, ಕರೀಕಟ್ಟಿ, ತಟ್ಟಿ, ಕೋಟ್ನಿ ಹಳ್ಳಗಳಲ್ಲೂ ನೀರಿನ ರಭಸ ಮುಂದುವರೆದಿದೆ. ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿದೆ.
ಭೀಮಗಡ ವನ್ಯಧಾಮ, ಲೋಂಡಾ ಮತ್ತು ಕಣಕುಂಬಿ ಅರಣ್ಯ ಪ್ರದೇಶದ 30ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಣ್ಯ ಪ್ರದೇಶ ಸುತ್ತುವರಿದ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ಕಡೆ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಮೊಬೈಲ್ ನೆಟ್ವರ್ಕ್ ಕೈ ಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗುರುವಾರ ಕಣಕುಂಬಿಯಲ್ಲಿ 16.7 ಸೆಂ.ಮೀ, ಜಾಂಬೋಟಿಯಲ್ಲಿ 10.2 ಸೆಂ.ಮೀ, ಅಸೋಗಾ 5.6 ಸೆಂ.ಮೀ, ಗುಂಜಿ 7.8 ಸೆಂ.ಮೀ, ಲೋಂಡಾ 9.2 ಸೆಂ.ಮೀ, ಖಾನಾಪುರ ಪಟ್ಟಣ 7.5 ಸೆಂ.ಮೀ, ನಾಗರಗಾಳಿ 3.3 ಸೆಂ.ಮೀ, ಕಕ್ಕೇರಿ 3.14 ಸೆಂ.ಮೀ ಮತ್ತು ಬೀಡಿ ಭಾಗದಲ್ಲಿ 2 ಸೆಂ.ಮೀ ಮಳೆ ಸುರಿದಿದೆ ಎಂದು ತಹಶೀಲ್ದಾರ್ ಕಚೇರಿ ಮಾಹಿತಿ ನೀಡಿದೆ.