Breaking News

ತಿರಸ್ಕಾರದಿಂದ ಪುರಸ್ಕಾರ

Spread the love

ಪ್ಪಾಳೆ ತಟ್ಟಿ ಭಿಕ್ಷೆ ಬೇಡುತ್ತಿದ್ದ ಕೈಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿವೆ. ಕೀಳಾಗಿ ಕಾಣಲಾಗುತ್ತಿದ್ದ ದೇಹಗಳಿಗೆ ಹೊಸ ಮೈಮಾಟ ಬಂದಿದೆ. ಗೇಲಿಗೆ ಗುರಿಯಾಗಿದ್ದ ನಡಿಗೆ ‘ಕ್ಯಾಟ್‌ವಾಕ್‌’ ಆಗಿದೆ. ಮೂದಲಿಕೆಗೆ ಕಾರಣವಾಗಿದ್ದ ಮುಖದ ಮೇಲೆ ಮಾದಕ ಕಳೆ ಬಂದಿದೆ.

ವಿರೂಪಿ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ರೂಪದರ್ಶಿಗಳು…

ಹೌದು. ಲಿಂಗತ್ವ ಅಲ್ಪಸಂಖ್ಯಾತರ ಬಾಳಲ್ಲಿ ಪರಿವರ್ತನೆಯ ಸಮಯ ಬಂದಿದೆ. ಅವಮಾನಕ್ಕೆ ಒಳಗಾದವರು ಮುಖ್ಯವಾಹಿನಿಯಲ್ಲಿ ಸಾಗುವ ಯತ್ನ ನಡೆಸಿದ್ದಾರೆ. ಕೀಳಾಗಿ ಕಾಣುತ್ತಿದ್ದ ಕಣ್ಣುಗಳು ಹುಬ್ಬೇರಿಸಿ ದಿಟ್ಟಿಸುವಂತೆ ಅವರು ಬದಲಾಗುತ್ತಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಇಂಥ ಭರವಸೆ ಮೂಡಿಸಿದ್ದು ಬೆಳಗಾವಿಯಲ್ಲಿ ನಡೆದ ‘ಫ್ಯಾಷನ್‌ ಶೋ’! ಹದಿನೈದು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಅವರ ಫ್ಯಾಷನ್‌ ಶೋ ದುನಿಯಾ...!

ಇಂಥ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು ಬೆಳಗಾವಿಯ ಕರ್ಮಭೂಮಿ ಫೌಂಡೇಷನ್‌. ರಾಜ್ಯದಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್‌ ಶೋ ಏರ್ಪಡಿಸುವ ಆಲೋಚನೆ ಫೌಂಡೇಷನ್‌ನ ನಿರ್ಮಾತೃ ಶ್ವೇತಾ ಪಾಟೀಲ ಅವರಿಗೆ ಬಂದಿತು.

ಶ್ವೇತಾ ಅವರ ಮನಸ್ಸಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ಹೊಸ ಅರ್ಥ ಕೊಡಬೇಕು ಎಂಬ ತುಡಿತ ಇತ್ತು. ತಮ್ಮ ದೇಹದ ಬಗ್ಗೆ ಅವರಲ್ಲೇ ಕೀಳರಿಮೆ ಬೆಳೆದಿರುತ್ತದೆ. ಕೀಳರಿಮೆ ಇರುವಲ್ಲೇ ಯಶಸ್ಸಿನ ಗುಟ್ಟು ಇರುತ್ತದೆ ಎಂಬುದು ಶ್ವೇತಾ ಅವರ ನಂಬಿಕೆ. ದೇಹವನ್ನೇ ವಿಷಯವನ್ನಾಗಿಸಿಕೊಂಡು ಏನಾದರೂ ಮಾಡಬೇಕು ಎಂಬ ಆಲೋಚನೆ ಮಾಡಿದಾಗ ಹೊಳೆದಿದ್ದು ಫ್ಯಾಷನ್‌ ಶೋ.

ದುಡಿಯುತ್ತೇವೆ ಎಂದರೂ ಕೆಲಸ ಕೊಡುವವರಿಲ್ಲ, ನರ್ತಿಸುತ್ತೇವೆಂದರೆ ವೇದಿಕೆಗಳಿಲ್ಲ, ಸೇವೆ ಮಾಡಿ ಬದುಕುತ್ತೇವೆ ಎಂದರೂ ಜತೆ ಸೇರಿಸುವವರಿಲ್ಲ, ಕೊನೆ ಪಕ್ಷ ಮನೆಯ ಮೂಲೆಯಲ್ಲಿ ಬಿದ್ದಿರುತ್ತೇವೆ ಎಂದರೂ ಇಟ್ಟುಕೊಳ್ಳುವವರಿಲ್ಲ. ಹೆತ್ತವರೇ ಮಡಿಲಿನಿಂದ ಹೊರಹಾಕಿದ ಜೀವಗಳು ಅವು. ಸಮಾಜವಂತೂ ತಿರಸ್ಕಾರದ ಮುದ್ರೆ ಒತ್ತಿದೆ. ಅದೇ ಸಮಾಜದ ಮುಂದೆ ಫ್ಯಾಷನ್‌ ಪ್ರದರ್ಶನ ನೀಡುವ ಸವಾಲು ಸ್ವೀಕರಿಸಬೇಕಾಗಿತ್ತು. ಅವಮಾನಿಸಿದ ದೇಹಕ್ಕೆ ಗೌರವ ತಂದುಕೊಡುವಲ್ಲಿ ಶ್ವೇತಾ ಯಶಸ್ವಿಯೂ ಆದರು.


Spread the love

About Laxminews 24x7

Check Also

ವಿರಾಟ ಹಿಂದೂ ಸಮ್ಮೇಳನ ಹಿನ್ನೆಲೆ: ಶ್ರೀ ಸಾಯಿ ಮಂದಿರದಲ್ಲಿ ಆಕರ್ಷಕ ರಂಗೋಲಿ ಸ್ಪರ್ಧೆ; 120ಕ್ಕೂ ಹೆಚ್ಚು ಮಹಿಳೆಯರು ಭಾಗಿ

Spread the love ವಿರಾಟ ಹಿಂದೂ ಸಮ್ಮೇಳನ ಹಿನ್ನೆಲೆ: ಶ್ರೀ ಸಾಯಿ ಮಂದಿರದಲ್ಲಿ ಆಕರ್ಷಕ ರಂಗೋಲಿ ಸ್ಪರ್ಧೆ; 120ಕ್ಕೂ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ