ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಮತ್ತು ಗ್ಯಾಂಗ್ಗೆ ಪೊಲೀಸರು ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಪ್ರಕರಣದಲ್ಲಿ ಯಾರೊಬ್ಬರು ತಪ್ಪಿಸಿಕೊಳ್ಳದಂತೆ ಎಲ್ಲಾ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಮಾತ್ರ ತಮ್ಮ ಬಾಸ್ ತಪ್ಪೇ ಮಾಡಿಲ್ಲ, ಇದೆಲ್ಲಾ ಕುತಂತ್ರ ಎಂದು ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.
ನಿರ್ಮಾಪಕ ಉಮಾಪತಿ ಗೌಡ ದರ್ಶನ್ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದವರು. ಬಳಿಕ ಇಬ್ಬರ ಜೊತೆ ಮನಸ್ತಾಪವಾಗಿ ದೂರವಾಗಿದ್ದರು. ದರ್ಶನ್ ಉಮಾಪತಿಗೆ ಬಹಿರಂಗವಾಗಿಯೇ ವಾರ್ನಿಂಗ್ ಮಾಡಿದ್ದರು. ತಗಡು ಎಂದಿದ್ದರು. ದರ್ಶನ್ ಬಂಧನವಾದ ಬಳಿಕ ಉಮಾಪತಿ ಹಳೆಯ ವಿಚಾರಗಳನ್ನೆಲ್ಲ ಮಾತನಾಡಿದ್ದರು.
ದರ್ಶನ್ ಸ್ನೇಹಿತರು ಸರಿ ಇಲ್ಲ, ಸಹವಾಸದಿಂದಲೇ ಅವರಿಗೆ ಈ ಪರಿಸ್ಥಿತಿ ಬಂದಿದೆ. ನನಗೂ ಬೆದರಿಕೆ ಹಾಕಿದ್ದರು ಎಂದು ಅನೇಕ ವಿಚಾರಗಳನ್ನು ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಇದು ಈಗ ಅಭಿಮಾನಿಗಳನ್ನು ಕೆರಳಿಸಿದೆ. ದರ್ಶನ್ ಹೊರಗಡೆ ಇದ್ದಾಗ ಇದೆಲ್ಲಾ ಮಾತನಾಡಬೇಕಿತ್ತು, ಅವರು ಒಳಗಡೆ ಇರುವಾಗ ಎಲ್ಲರೂ ಮಾತನಾಡುತ್ತಿದ್ದೀರಾ ಎನ್ನುತ್ತಿದ್ದಾರೆ.
ಊರು ಬಿಟ್ಬಿಡಿ ಎಂದ ಅಭಿಮಾನಿ
ಉಮಾಪತಿ, ಪ್ರಥಮ್ ಸೇರಿದಂತೆ ಹಲವರು ದರ್ಶನ್ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಕೇಳಿ ರೊಚ್ಚಿಗೆದ್ದ ಅಭಿಮಾನಿಯೊಬ್ಬ ವಿಡಿಯೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ನಾವು ನೋವಲ್ಲಿದ್ದೀವಿ, ಮತ್ತೆ ಕೆರಳಿಸಬೇಡಿ ಎಂದು ಬಹಿರಂಗವಾಗಿಯೇ ಎಚ್ಚರಿಕೆ ಕೊಟ್ಟಿದ್ದಾನೆ.
ಉಮಾಪತಿ ಅವರೇ ನಾವು ನಾವು ಸಿಕ್ಕಾಪಟ್ಟೆ ನೋವಲ್ಲಿದ್ದೀವಿ, ನಿಮ್ಮ ಡೈಲಾಗ್ ಶೋಕಿನಾ ಈಗ ಮೀಡಿಯಾ ಮುಂದೆ ತೋರಿಸಲು ಬರಬೇಡಿ. ನಮ್ಮ ಯಜಮಾನ್ರು ನೀನು ಸಿನಿಮಾ ಮಾಡಲಿ ಎಂದು ಮನೆ ಬಾಗಿಲಿಗೆ ಬಿಟ್ಟುಕೊಂಡಿದ್ದಕ್ಕೆ ನೀನು ಸಿನಿಮಾ ಮಾಡಿದ್ದು, ದುಡ್ಡು ಕೊಟ್ಟಿದ್ದು. ನಿನ್ನ ದುಡ್ಡನಲ್ಲಿ ಅಲ್ಲಪ್ಪ ಲ್ಯಾಂಬೋರ್ಗಿನಿ ತಗೊಂಡಿದ್ದು, ನಿನ್ ಹತ್ರ ದುಡ್ಡು ಇಸ್ಕೊಂಡಾಗ ನಮ್ ಹತ್ರ ಮೂರನೇದು ಲ್ಯಾಂಬೋರ್ಗಿನಿ ಬಂದಿದ್ದು. ನಾವು ನೋವಲ್ಲಿದಿವಿ ಈ ಟೈಮಲ್ಲಿ ಬೇಡ, ಯಾಕೆ ಸುಮ್ಮನೆ ನಮ್ಮುನ್ನೆಲ್ಲಾ ಕೆಣುಕ್ತಾ ಇದಿರಾ, ಏನಾದ್ರೂ ಇದ್ರೆ ಅವರು (ದರ್ಶನ್) ಹೊರಗಡೆ ಬಂದಮೇಲೆ ನಾವೇ ಫೇಸ್ ಟು ಫೇಸ್ ಕೂರಿಸ್ತಿವಿ ಬಗೆಹರಿಸಿಕೊಳ್ಳಿ, ನೀನು ಪ್ರಜ್ಞಾವಂತ ಇದಿಯಾ, ಮಾಧ್ಯಮಗಳ ಮುಂದೆ ಮಾತನಾಡುವಾಗ ಬಳಸೋ ಭಾಷೆ ಬಗ್ಗೆ ಗಮನ ಇರಲಿ ಎಂದಿದ್ದಾನೆ.
ದರ್ಶನ್ ಅಭಿಮಾನಿಗಳನ್ನು ಲಾಠಿಯಲ್ಲಿ ಹೊಡೆದು ಓಡಿಸುತ್ತೇನೆ ಎಂದು ಹೇಳಿದ್ದ ಪ್ರಥಮ್ ಬಗ್ಗೆ ಕೂಡ ಕಿಡಿಕಾರಿದ್ದಾನೆ. “ಏನಪ್ಪಾ ಪ್ರಥಮ್, ಸುಪ್ರೀಂ ಹೀರೋನಾ ನೀನು? ನಮ್ಮುನ್ನಾ ಸ್ಟೇಷನ್ ಮುಂದೆ ಲಾಠಿ ತಗೊಂಡು ಹೊಡಿತ್ಯಾ? ನಮ್ಮ ಅಪ್ಪ ಅಮ್ಮಂಗೆ ಅನ್ನ ಹಾಕು ಅಂತಿಯಾ, ಅವ್ರ್ ಸಿನಿಮಾ ನೋಡಿನೇ ಇಷ್ಟ್ ಅಭಿಮಾನ ಇಟ್ಕೊಂಡು ಜೈಲ್ ಮುಂದೆ ಕಾಯ್ತಾ ಇದಿವಿ ಅಂದ್ರೆ, ಇನ್ನು ಮನೆಲಿರೋ ಅಪ್ಪ ಅಮ್ಮನ್ನ ಹೆಂಗ್ ನೋಡ್ತೀವಿ ಅಂತಾ ಹೇಳಿಕೊಡ್ಬೇಕಾ, ನಮ್ ಯಜಮಾನ್ರು ನಮಗೆ ಮನೆಗೆ ಒಳ್ಳೆ ಮಗ ಆಗಿ ಅಂತಾನೆ ಹೇಳಿರದು ಎಂದಿದ್ದಾರೆ.
ಇವತ್ತು ಯಾರ್ ಯಾರ್ ಮಾತಾಡ್ತಿದಿರಾ ನಿಮಗೆಲ್ಲಾ ಮುಂದೈತೆ, ಎಲ್ಲಾ ಸೇರಿಸಿ ವಾಪಸ್ ಕೊಡ್ತೀವಿ. ದರ್ಶನ್ಗೆ ಜಾಮೀನು ಸಿಗುತ್ತಲ್ಲಾ ಅವತ್ ಹಿಂದಿನ ದಿನಾ ಎಲ್ಲಾ ಸೇರಿ ಊರು ಬಿಟ್ಬಿಡಿ ಎಂದು ಹೇಳಿದ್ದಾನೆ.
ವಿಡಿಯೋ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದು ಬಹಿರಂಗವಾಗಿ ಬೆದರಿಕೆ ಹಾಕುವ ಇಂತಹ ಅಭಿಮಾನಿಗಳ ವಿರುದ್ಧವೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.