ಮಂಗಳೂರು: ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರೊಂದು ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಗೊಂಡ ಪರಿಣಾಮ ತಾಯಿ-ಮಗ ಮೃತಪಟ್ಟ ಘಟನೆ ಇಂದು (ಮೇ.21) ಬೆಳ್ಳಂಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬೀರ್ ಎಂಬವರ ಮಗ ಮೊಹಮ್ಮದ್ ಶಫೀಕ್(20) ಹಾಗೂ ಅವರ ಪತ್ನಿ ಸಫಿಯಾ(50) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂವರು ಮಕ್ಕಳು ಕೂಡಾ ಇದ್ದು, ಅವರಿಗೂ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದೆ. ಬೆಂಗಳೂರಿನಲ್ಲಿ ಕಳೆದ ದಿನ ಸಂಬಂಧಿಕರೋರ್ವರ ಮದುವೆ ಔತಣಕೂಟ ಸಮಾರಂಭದಲ್ಲಿ ಭಾಗವಹಿಸಿ, ಹಿಂದಿರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ
ಘಟನೆಯ ಬಗ್ಗೆ ಕುಟುಂಬದ ಸದಸ್ಯರೋರ್ವರು ಮಾಹಿತಿ ನೀಡಿದ್ದು, “ಬೆಂಗಳೂರಿನಲ್ಲಿ ಕಳೆದ ದಿನ ನಮ್ಮ ಕುಟುಂಬದ ಸದಸ್ಯರೋರ್ವರ ಮಗಳ ಮದುವೆಯ ಔತಣಕೂಟ ಏರ್ಪಡಿಸಿದ್ದೆವು. ಅದರಲ್ಲಿ ಕಾರಿನಲ್ಲಿದ್ದ ಕುಟುಂಬ ಕೂಡ ಭಾಗವಹಿಸಿತ್ತು.
12 ಗಂಟೆ ರಾತ್ರಿಗೆ ಬೆಂಗಳೂರಿನಿಂದ ಮಂಗಳೂರಿನ ಮನೆಗೆ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ಶಿರಾಡಿ ಘಾಟಿಯಲ್ಲಿ ಟ್ರಕ್ವೊಂದು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ನಮಗೆ ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.