ನವದೆಹಲಿ: ಮಹಿಳೆ ಮೇಲಿನ ಅಮಾನವೀಯ ಹಲ್ಲೆ ಮಾಡಿದ ಬೆಳಗಾವಿ ಘಟನೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.
ಈ ಅಮಾನವೀಯ ಪ್ರಕರಣದ ಬಗ್ಗೆ ಉತ್ತರಪ್ರದೇಶದ ಬಿಜೆಪಿ ಸಂಸದೆ ಕಾಂತಾ ಕರ್ದಮ್ ಅವರು ಸದನಕ್ಕೆ ಗಮನಕ್ಕೆ ತಂದರು. ಕರ್ನಾಟಕದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಇದಕ್ಕೆ ಸದನದಲ್ಲಿ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಶುರು ಮಾಡಿದರು. ಇದರ ಮಧ್ಯೆಯೂ ಸಂಸದೆ ಮಹಿಳೆಯ ಪರವಾಗಿ ಮಾತನಾಡಿ, ಮಹಿಳೆಯ ತಪ್ಪು ಇಲ್ಲದಿದ್ದರೂ, ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ. ರಾಜ್ಯದಲ್ಲಿ ದುರಾಚಾರಗಳು ಹೆಚ್ಚಾಗಿವೆ. ಮಹಿಳೆಯರಿಗೆ ರಾಜ್ಯದಲ್ಲಿ ಅಸುರಕ್ಷಿತೆಯ ಭೀತಿ ಎದುರಾಗಿದೆ ಎಂದು ಅವರು ಹೇಳಿದರು.
ಮಹಿಳೆಯ ಮೇಲೆ ನಡೆದ ದೌರ್ಜನ್ಯದಿಂದ ದೇಶದ ಮಾನ ಹರಾಜಾಗಿದೆ. ಸರ್ಕಾರ ಮತ್ತು ಪೊಲೀಸರ ನಡೆಯ ವಿರುದ್ಧ ಅಲ್ಲಿನ ಹೈಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಷ್ಟೆಲ್ಲ ಅನಾಚಾರ ನಡೆದರೂ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಮಹಿಳೆಯರ ರಕ್ಷಣೆ ಮಾಡುವುದು ಸರ್ಕಾರಗಳ ಮೊದಲ ಆದ್ಯತೆಯಾಗಿದೆ. ರಾಜ್ಯ ಸರ್ಕಾರ ಮಾತ್ರ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಳ್ಳದೇ ಕಾಲಹರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಮಹಿಳೆ ಅಂತಾನೂ ನೋಡದೇ ಆಕೆಯ ಮೇಲೆ ನಿರ್ದಯವಾಗಿ ಹಲ್ಲೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ತಿಳಿದು ಬರುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಕಠಿಣ ಕ್ರಮಗಳನ್ನು ಜಾರಿ ಮಾಡಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ. ಸದನದಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾದ ಕಾರಣ ಸಭಾಪತಿಗಳು ಸದನವನ್ನು ಮುಂದೂಡಿದರು.