ಬೈಲಹೊಂಗಲ: ರೈತ ಸಮುದಾಯದ ಆಧ್ಯಾತ್ಮಿಕ ಕೇಂದ್ರವಾಗಿರುವ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಡಿ.4ರಿಂದ 8ರವರೆಗೆ ಅದ್ಧೂರಿ ಜಾತ್ರಾ ಮಹೋತ್ಸವ ನೆರವೇರಲಿದೆ.
ಡಿ. 4ರಂದು ಸಂಜೆ 4.30ಕ್ಕೆ ನೆರವೇರಲಿರುವ ನವಿಲಿನ ಕಳಶ ಹೊತ್ತ ಮಹಾತೇರು ಎಳೆಯಲು ಈ ಭಾಗದ ಸದ್ಭಕ್ತರು ಆತುರದಿಂದ ಕಾಯುತ್ತಿದ್ದಾರೆ.
ಲಕ್ಷಾಂತರ ಭಕ್ತರ ಆಗಮನ: ಸರ್ವಧರ್ಮೀಯರು ಶ್ರದ್ಧಾಭಕ್ತಿಯಿಂದ ಪೂಜಿಸುವ ಮರಡಿ ಬಸವೇಶ್ವರ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ. ಸ್ಥಳೀಯರು ತಮ್ಮ ಮನೆಗಳನ್ನು ಸಿಂಗರಿಸಿ ಸಂಬಂಧಿಗಳನ್ನು ಆಹ್ವಾನಿಸುತ್ತಿದ್ದಾರೆ. ಜಾತ್ರೆಗೆ ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ತೀರಿಸಿ, ಭಕ್ತಿ ಸಮರ್ಪಿಸುತ್ತಾರೆ.
80 ಅಡಿ ಎತ್ತರದ ರಥ: ಪ್ರತಿ ವರ್ಷ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭವಾಗುತ್ತದೆ. ವಿಜಯದಶಮಿಯಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಗಾಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜವಳಿ ಕೂಟಕ್ಕೆ ತರಲಾಗುತ್ತದೆ. ದೀಪಾವಳಿ ಬಲಿಪಾಡ್ಯಮಿ ದಿನದಂದು ಕಟ್ಟಿಗೆಗಳನ್ನು ತಂದು ರಥ ಸಿದ್ಧಪಡಿಸಲಾಗುತ್ತದೆ.
80 ಅಡಿ ಎತ್ತರದ ಭವ್ಯ ರಥದಲ್ಲಿ ಬಸವೇಶ್ವರ, ಮಹಾನ್ ತಪಸ್ವಿಗಳ ಭಾವಚಿತ್ರ ಅಳವಡಿಸಲಾಗುತ್ತದೆ. ರಾಷ್ಟ್ರಧ್ವಜ ಮಾದರಿಯಲ್ಲಿ ರಥ ಅಲಂಕರಿಸಲಾಗುತ್ತದೆ. ರಥದ ಮೇಲಿನ ಬೆಳ್ಳಿ ನವಿಲು, ಬಂಗಾರ ಲೇಪಿನ ಕಳಶ ನೋಡುಗರನ್ನು ಆಕರ್ಷಿಸುತ್ತವೆ. ಹಲವು ತಿರುವುಗಳ ಮಧ್ಯೆಯೂ ಎತ್ತರದ ಪ್ರದೇಶಕ್ಕೆ ರಥೋತ್ಸವ ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ರಥದಲ್ಲಿ ಶರಣರ ವಚನ ಗ್ರಂಥಗಳು, ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.