ಕರ್ನಾಟಕ ಮಹಾರಾಷ್ಟ್ರ (Maharashtra) ಗಡಿಯಲ್ಲಿ ಚೀಟಿ ತೋರಿಸಿ ಯಾಮಾರಿಸಿ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಕಿರಾಣಿ ಅಂಗಡಿಗೆ ಆಗಮಿಸಿದ ವ್ಯಕ್ತಿ ಒಂದು ಬಿಳಿ ಬಣ್ಣದ ಚೀಟಿ ತೋರಿಸುತ್ತಿದ್ದಂತೆ ಅಂಗಡಿ ಮಾಲಕಿ ತನ್ನ ಚಿನ್ನದ ಮಾಂಗಲ್ಯ (gold chain) ತೆಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ ಅಷ್ಟೇ. ಜಸ್ಟ್ ಎರಡೂವರೆ ನಿಮಿಷದಲ್ಲಿ ತನ್ನ ಕೈಚೆಳಕ ತೋರಿಸಿ ಚಿನ್ನದ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ. ಹೌದು ಇದು ವಿಚಿತ್ರ ಅಂದರೂ ಸತ್ಯ. ಯುವಕನೊಬ್ಬ ಗುಟ್ಕಾ ಖರೀದಿಸುವ ನೆಪದಲ್ಲಿ ಕಿರಾಣಿ ಅಂಗಡಿಗೆ ಬಂದು ಬಳಿಕ ತೆಂಗಿನಕಾಯಿ, ಊದುಬತ್ತಿ ಖರೀದಿಸಿ ಚೀಟಿ ತೋರಿಸಿ ಮಹಿಳೆಯ ಚಿನ್ನದ ಮಾಂಗಲ್ಯದ ಜೊತೆ ಎಸ್ಕೇಪ್ (chain snaching) ಆಗಿದ್ದಾನೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ( chikkodi) ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶನಿವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ಅಂದ್ರೆ ನವೆಂಬರ್ 26ರ ಸಂಜೆ 4 ಗಂಟೆ ಸುಮಾರಿಗೆ ರುಪಿನಾಳ ಗ್ರಾಮದ ಚಿಕ್ಕೋಡಿ ಮೀರಜ್ ರಸ್ತೆಯ ಪಕ್ಕದಲ್ಲಿರುವ ಪವಾರ್ ಕುಟುಂಬಕ್ಕೆ ಸೇರಿದ ಕಿರಾಣಿ ಅಂಗಡಿಗೆ ಬೈಕ್ನಲ್ಲಿ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಕಿರಾಣಿ ಅಂಗಡಿ ಎದುರು ಗಿರಾಕಿಗಳು ಇರುವುದನ್ನು ಗಮನಿಸಿ ಮೊದಲು ಗುಟ್ಕಾ ಖರೀದಿಸಿದ್ದಾನೆ. ಅಂಗಡಿ ಬಳಿಯ ಗಿರಾಕಿಗಳು ತೆರಳುತ್ತಿದ್ದಂತೆ ಮತ್ತೆ ಅಂಗಡಿಗೆ ಬಂದ ಯುವಕ ಕಿರಾಣಿ ಅಂಗಡಿ ಒಡತಿ ಸುವರ್ಣ ಪವಾರ್ ಬಳಿ ತೆಂಗಿನಕಾಯಿ ಹಾಗೂ ಊದುಬತ್ತಿ ಖರೀದಿಸಿದ್ದಾನೆ.
ಬಳಿಕ ತನ್ನ ಜೇಬಿನಲ್ಲಿದ್ದ ಬಿಳಿ ಬಣ್ಣದ ಚೀಟಿಯೊಂದನ್ನು ತಗೆದು ಕಿರಾಣಿ ಅಂಗಡಿ ಒಡತಿ ಸುವರ್ಣಗೆ ತೋರಿಸಿದ್ದಾನೆ. ಆ ಚೀಟಿ ನೋಡುತ್ತಿದ್ದಂತೆ ಸುವರ್ಣಗೆ ತಲೆ ಸುತ್ತುವ ಅನುಭವ ಆಗಿದೆಯಂತೆ. ಬಳಿಕ ಆತ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಚೀಟಿಯಲ್ಲಿ ಇಡಲು ಹೇಳಿದ್ದಾನೆ. ಆತ ಹೇಳಿದಂತೆ ಮಹಿಳೆ ತನ್ನ ಕೊರಳಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರ ತಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ.
ಬಳಿಕ ಅದನ್ನು ಆ ಚೀಟಿಯಲ್ಲಿಟ್ಟು ಅಂಗಡಿಯ ಡ್ರಾವರ್ನಲ್ಲಿ ಇಡಲು ಹೇಳಿದ್ದಾನೆ. ಬಳಿಕ ತನ್ನ ಜೇಬಿನಿಂದ ಮತ್ತೊಂದು ಚೀಟಿ ತಗೆದು ಆ ಚೀಟಿಯನ್ನೂ ಆ ಡ್ರಾವರ್ನಲ್ಲಿಟ್ಟಿದ್ದಾನೆ. ಇದೇ ವೇಳೆ ಮಹಿಳೆಯ ಯಾಮಾರಿಸಿ ತನ್ನ ಜೇಬಿನಲ್ಲಿ ಮೊದಲೇ ಇರಿಸಿದ್ದ ಮರಳು ತುಂಬಿದ ಚೀಟಿ ಇಟ್ಟು ಚಿನ್ನದ ಮಾಂಗಲ್ಯ ಇದ್ದ ಚೀಟಿ ಪಡೆದು ಬೈಕ್ ಏರಿ ಹೊರಟೇ ಬಿಟ್ಟಿದ್ದಾನೆ.