ದಾವಣಗೆರೆ: ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹಾಗೂ ಸಮಾಜದ ಎಲ್ಲ ಉಪಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕೆಂದು ಆಗ್ರಹಿಸಿ ಇಂದಿನಿಂದ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಏಳನೇ ಹಂತದ ಹೋರಾಟವನ್ನು ದಾವಣಗೆರೆಯಲ್ಲಿ ನಡೆಸಿದರು.
ನಗರದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕೂತು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹಾಗೂ ಭಕ್ತರು ಕೈಯಲ್ಲಿ ಲಿಂಗ ಹಿಡಿದು ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ 2ಎ ಮೀಸಲಾತಿ ಹೋರಾಟ ಇಂದಿನಿಂದ ಪ್ರಾರಂಭಿಸಿದರು.
ದಾವಣಗೆರೆ ಆವರಗೆರೆ ಬಳಿಯ ಚಿಂದೋಡಿ ಲೀಲಾ ಸಭಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮೀಸಲಾತಿ ಕೂಡಿಸಲು ಪ್ರಯತ್ನಿಸುವೆ ಎಂದು ಆಶ್ವಾಸನೆ ನೀಡಿದರು ಬಳಿಕ ದಾವಣಗೆರೆ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ತಡೆದು ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಶ್ರೀಗಳು 2A ಮೀಸಲಾತಿ, ಲಿಂಗಾಯತ ಉಪಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಹೋರಾಟದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಿಷ್ಟು : ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಹೋರಾಟದ ವೇದಿಕೆಯಲ್ಲಿ ಬಸವ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದು ದಾವಣಗೆರೆಯಲ್ಲಿ ನಡೆದ ಹೋರಾಟ ಸರ್ಕಾರದ ಕಣ್ಣು ತೆರೆಸಿತ್ತು. ಇದೀಗ ಮತ್ತೆ ದಾವಣಗೆರೆಯಲ್ಲಿ ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದೇವೆ. ಸರ್ಕಾರ ಕಣ್ಣು ತೆರೆಯಲಿ, ಜಾತಿಗಣತಿಯನ್ನು ಸರ್ಕಾರ ಮಾಡಿದ್ರೆ ಅಭ್ಯಂತರ ಇಲ್ಲ ಮಾಡಲಿ, ಈಶ್ವರ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಸಮಾಜಕ್ಕೆ ಶಕ್ತಿ ಇದ್ದಂತೆ ಎಂದು ಹೇಳಿದರು.