Breaking News

ಹುಬ್ಬಳ್ಳಿಯಲ್ಲಿ ಮಳೆ ರಗಳೆ: ಜಲಾವೃತಗೊಂಡ ರಸ್ತೆಗಳು

Spread the love

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲ ಕೆರೆಯಂತಾಗಿದ್ದವು. ನಗರದ ಬಹುತೇಕ ರಸ್ತೆಗಳಲ್ಲಿ ಮಳೆ‌ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.‌ ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ‌ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು.

ಹೀಗಾಗಿ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇ ಸಾಮಾನ್ಯವಾಗಿದೆ.

ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರ ಸಾಹಸ ಪಡುವಂತಾಗಿದೆ. ಒಳಚರಂಡಿ‌ ಯೋಜನೆಗೆ ಸಂಬಂಧಿಸಿದಂತೆ ಹಲವಾರಿ ಬಾರಿ ಇಲ್ಲಿನ‌ ಜನರು ಮಹಾನಗರ ಪಾಲಿಕೆಗೆ ದೂರು‌ ನೀಡಿದ್ದಾರೆ. ಆದರೂ ಮಳೆ‌ ಬಂದಾಗಲೆಲ್ಲ ಇಂತ ಸಮಸ್ಯೆ ಉದ್ಬವವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಮುಖದಲ್ಲಿ ಮಂದಹಾಸ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಮುಂಗಾರು ಮಳೆ‌ ಕೈಕೊಟ್ಟಿತ್ತು. ಈಗ ಹಿಂಗಾರು ಬಿತ್ತನೆ ಮಾಡಿದ್ದ ರೈತರು ಆಕಾಶದತ್ತ ಮುಖ ಮಾಡಿಕೊಂಡಿದ್ದರು‌. ಆದರೆ, ಈಗ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಕಡಲೆ, ಜೋಳ, ಗೋಧಿ, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಬೆಳೆದ ಬೆಳಗಳು ಒಣಗಿ ಹೋಗುತ್ತಿದ್ದವು. ಆದರೆ ಅಲ್ಲಲ್ಲಿ ಉಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪಂಪಸೆಟ್​ಗಳ ಮೊರೆ ಹೋಗಿದ್ದರು.‌ ಇನ್ನು ಕೆಲವರು ನೀರಿ‌ನ ಟ್ಯಾಂಕರ್​ ಬಳಸಿ ನೀರು ಹರಿಸಿದ್ದರು.

ಆದರೆ ಇಂದು ಹಿಂಗಾರು ಕೈಕೊಟ್ಟಿತ್ತು ಎನ್ನುವಷ್ಟರಲ್ಲಿ ಮಳೆರಾಯ ಕರುಣೆ ತೋರಿದ್ದು, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಇನ್ನು ವಾಣಿಜ್ಯ ನಗರಿಯ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ ದೃಶ್ಯ ಸಾಮಾನ್ಯವಾದರೆ, ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು.‌ ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿತ್ತು.

ರೈತರ ಅಹವಾಲು ಸ್ವೀಕರಿಸಿ ಹಿಂದಿರುಗಿದ ಸಂತೋಷ್​ ಲಾಡ್​ : ಉತ್ತರ ಕರ್ನಾಟಕ ‌ಭಾಗದಲ್ಲಿ‌ ಬರದ ಛಾಯೆ ಆವರಿಸಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬರ ಪರಿಶೀಲನೆ ನಡೆಸಿದರು. ಆದರೆ ಬರ ಅಧ್ಯಯನಕ್ಕೆ ಮಳೆ ಅಡ್ಡಿಯಾಗಿದೆ. ಮಳೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿಯೇ ಬರ ಪರಿಶೀಲನೆಯನ್ನು ಮೊಟಕುಗೊಳಿಸಿದ ಸಚಿವರು, ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಕುಸುಗಲ್ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರು ಹಾಗೂ ರೈತರ ಅಹವಾಲು ಸ್ವೀಕರಿಸಿದರು. ಅಲ್ಲದೇ ರೈತರು ತಮ್ಮ ಕಷ್ಟವನ್ನು ಸಚಿವರ ಮುಂದೆ ಹೇಳಿಕೊಂಡಿದ್ದು, ಕೂಡಲೇ ಬಗೆಹರಿಸುವ ಭರವಸೆ ನೀಡಿದರು. ಇನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಹಾಗೂ ಕುಂದಗೋಳ ತಾಲೂಕಿನ ಬರ ಪರಿಶೀಲನೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಮಳೆಯ ಆಗಮನದಿಂದ ಕಾರ್ಯಕ್ರಮ ಮೊಟಕುಗೊಂಡಿದೆ. ಮಳೆಯಾಗಿದ್ದರಿಂದ ರೈತರು ಹರ್ಷ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ