Breaking News

ಕರ್ನಾಟಕ‌ ರಾಜ್ಯೋತ್ಸವ ಆಚರಣೆಗೆ ಬೆಳಗಾವಿಯಲ್ಲಿ ಸಕಲ ಸಿದ್ಧತೆ ನಡೆದಿದೆ. ಕರಾಳ ದಿನಾಚರಣೆಗೆ ಯಾವುದೇ ರೀತಿಯ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ

Spread the love

ಬೆಳಗಾವಿ: ಕರ್ನಾಟಕ‌ ರಾಜ್ಯೋತ್ಸವಕ್ಕೆ ಕುಂದಾನಗರಿ ಬೆಳಗಾವಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಎಲ್ಲೆಲ್ಲೂ ಹಳದಿ, ಕೆಂಪು ಬಣ್ಣದ ಧ್ವಜಗಳೇ ರಾರಾಜಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ಕನ್ನಡಿಗರ ಸಮಾಗಮಕ್ಕೆ ರಾಣಿ ಚನ್ನಮ್ಮ ವೃತ್ತ ಸಾಕ್ಷಿಯಾಗಲಿದೆ. ಇಡೀ ರಾಜ್ಯದಲ್ಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಲ್ಲಿ ಗಲ್ಲಿಯಲ್ಲಿ ಕನ್ನಡದ ಝೇಂಕಾರ ಮೊಳಗುತ್ತಿದ್ದು, ಕನ್ನಡಮ್ಮನ ಹಬ್ಬಕ್ಕೆ ಕುಂದಾನಗರಿಯಲ್ಲಿ ಸಕಲ ತಯಾರಿ‌ ನಡೆದಿದೆ.

ರಾಣಿ ಚನ್ನಮ್ಮ ವೃತ್ತವಂತೂ ಅಕ್ಷರಶಃ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಚನ್ನಮ್ಮ ಪುತ್ಥಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದ್ದು, ಬಂಗಾರದ ಬಣ್ಣದಿಂದ‌ ಚನ್ನಮ್ಮಾಜಿ ಕಂಗೊಳಿಸುತ್ತಿದ್ದಾಳೆ. ಚನ್ನಮ್ಮ ವೃತ್ತದ ನಾಲ್ಕೂ ರಸ್ತೆಗಳಲ್ಲಿ ಹಳದಿ-ಕೆಂಪು ಬಣ್ಣದ ಬಟ್ಟೆಗಳಿಂದ ನಿರ್ಮಿಸಿರುವ ಕಮಾನುಗಳು ಆಕರ್ಷಿಸುತ್ತಿವೆ. ಇನ್ನು ಚನ್ನಮ್ಮ ವೃತ್ತದ ಸುತ್ತಲೂ ಚೆಂಡು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ ರಾಜ್ಯೋತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್​ಗಳ ಕಲರವ ಜೋರಾಗಿದೆ. ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ರಸ್ತೆ, ಕಾಲೇಜು ರಸ್ತೆ, ಅಂಬೇಡ್ಕರ್ ರಸ್ತೆ, ಬಸವೇಶ್ವರ ವೃತ್ತ ಸೇರಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳನ್ನು ಹಳದಿ-ಕೆಂಪು ಬಣ್ಣದ ಬಟ್ಟೆ, ವಿದ್ಯುತ್ ದೀಪಗಳಿಂದ ಶೃಂಗರಿಸಿರುವುದು ವಿಶೇಷವಾಗಿದೆ.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, “ಚನ್ನಮ್ಮ ವೃತ್ತದಲ್ಲಿ ಬೆಳಕು, ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸಿದ್ಧತೆಯನ್ನು ಪಾಲಿಕೆಯಿಂದ ಕೈಗೊಳ್ಳಲಾಗಿದೆ. ಚನ್ನಮ್ಮ ಪುತ್ಥಳಿಗೆ ಪ್ರತಿ ವರ್ಷದಂತೆ ಬಣ್ಣ ಹಚ್ಚಲಾಗಿದ್ದು, ಈ ಬಾರಿ ಪುತ್ಥಳಿ ತುಂಬಾ ಆಕರ್ಷಣೀಯವಾಗಿದೆ” ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, “ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಅಂದಾಜು 3 ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಬಾರಿ ಕೂಡ‌ ಕರಾಳ ದಿನಾಚರಣೆಗೆ ಯಾವುದೇ ರೀತಿಯ ಅನುಮತಿ ನೀಡಿರುವುದಿಲ್ಲ. ಜಿಲ್ಲಾಡಳಿತದಿಂದ ಕನ್ನಡಪರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿ ಒಟ್ಟಾರೆ 25 ಜನರನ್ನು ಗೌರವಿಸಿ ಸನ್ಮಾನಿಸಲಾಗುವುದು. ಮೆರವಣಿಗೆಯಲ್ಲಿ ಈ ಸಲ ನೂರಕ್ಕೂ ಅಧಿಕ ಕನ್ನಡ ನಾಡು, ನುಡಿ ಜಾಗೃತಿ ಮೂಡಿಸುವ ರೂಪಕಗಳು ಭಾಗವಹಿಸಲಿವೆ” ಎಂದು ತಿಳಿಸಿದರು.

“ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಮನೆಗಳ ಮುಂದೆ ರಂಗೋಲಿ ಹಾಕಿ, ಗಾಳಿಪಟಗಳನ್ನು ಹಾರಿಸಿ, ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸುವುದರೊಂದಿಗೆ ಸಂಭ್ರಮವನ್ನು ಹೆಚ್ಚಿಸಬೇಕು” ಎಂದು ಮನವಿ ಮಾಡಿಕೊಂಡರು.

“ಎಲ್ಲರೂ ತಮ್ಮ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ “ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಘೋಷವಾಕ್ಯವನ್ನು ಬರೆಯಬೇಕು. ಅದೇ ರೀತಿ ಸಂಜೆ‌ 5 ಗಂಟೆಗೆ ಎಲ್ಲ ಗ್ರಾಮಗಳ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಧದ ಗಾಳಿಪಟಗಳನ್ನು ಹಾರಿಸುವ ಮೂಲಕ ಸುವರ್ಣ ಸಂಭ್ರಮ‌ ಗಾಳಿಪಟ ಉತ್ಸವವನ್ನು ಆಚರಿಸಬೇಕು” ಎಂದು ಜಿಲ್ಲಾಧಿಕಾರಿ ವಿನಂತಿಸಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ