ವಿಜಯಪುರ: ನಾಟಕ ಪ್ರದರ್ಶನದ ವೇಳೆ ದಿಢೀರ್ ಕುಸಿದು ಬಿದ್ದು ಪೋಸ್ಟ್ಮ್ಯಾನ್ ಸಾವನ್ನಪ್ಪಿರುವ ಮನಕಲಕುವ ಘಟನೆ ಗುರುವಾರ ರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಶರಣು ಬಾಗಲಕೋಟೆ (24) ಎಂಬುವರೆ ಹೃದಯಾಘಾತದಿಂದ ಸಾವನ್ನಪ್ಪಿದ ಪೋಸ್ಟ್ಮ್ಯಾನ್ ಆಗಿದ್ದಾರೆ.
ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣು ಕೊಟ್ಯಾಳ್ಗೆ ಹೃದಯಾಘಾತವಾಗಿದೆ. ”ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ” ನಾಟಕ ಪ್ರದರ್ಶನ ವೇಳೆ ಈ ಘಟನೆ ನಡೆದಿದೆ. ಕೇವಲ 24 ವರ್ಷದ ಶರಣು ಬಾಗಲಕೋಟೆ ಇತ್ತೀಚೆಗೆ ಪೋಸ್ಟ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಗ್ರಾಮ ದೇವರ ಜಾತ್ರೆ ಹಿನ್ನೆಲೆ ನಾಟಕ ಹಮ್ಮಿಕೊಂಡಿದ್ದು, ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ತಾನು ಸಹ ನಾಟಕದಲ್ಲಿ ಡಾನ್ಸ್ ಮಾಡಲು ವೇದಿಕೆ ಏರಿದ್ದ ಶರಣು ವಿಧಿಯಾಟಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ.