ಮಂಡ್ಯದಲ್ಲಿ ಮುಂದುವರಿದ ಕನ್ನಡ ಪರ, ರೈತ ಸಂಘಟನೆಗಳ ಪ್ರತಿಭಟನೆ

Spread the love

ಮಂಡ್ಯ: ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಮತ್ತಷ್ಟು ತೀವ್ರಗೊಂಡಿದೆ. ಶ್ರೀರಂಗಪಟ್ಟಣದಲ್ಲಿಂದು ರೈತ ಸಂಘದ ವತಿಯಿಂದ ಹಣೆಗೆ ನಾಮ ಹಾಕಿಕೊಂಡು, ಜಾಗಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಯಿತು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಸರ್ಕಾರ ನಮಗೆ ನಾಮ ಹಾಕಿದೆ. ಕುಡಿಯಲು ನೀರಿಲ್ಲದಂತೆ ಮಾಡಿದೆ ಎಂದು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೋವಿಂದ, ಗೋವಿಂದ ನೀರು ಗೋವಿಂದ ಎಂದು ಜಾಗಟೆ ಬಾರಿಸುತ್ತ ಘೋಷಣೆ ಕೂಗುತ್ತಾ ಶ್ರೀರಂಗಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮತ್ತೊಂದೆಡೆ, ಮಂಡ್ಯದಲ್ಲಿ ರಾಜ್ಯ ರೈತ ಸಂಘದದಿಂದ‌ ಕೆಆರ್​ಎಸ್ ಡ್ಯಾಂಗೆ ಮುತ್ತಿಗೆ ಹಾಕಲಾಯಿತು. ನಂತರ ಕೆಆರ್​ಎಸ್​ನ ಪೊಲೀಸ್ ಠಾಣೆ ಬಳಿ ಜಮಾಯಿಸಿದ ರೈತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಗಟೆ, ಬಾಂಕಿ ಬಾರಿಸುತ್ತ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು‌.

ಮತ್ತೊಂದೆಡೆ, ರೈತರು ಇಂದು ಬೆಳಗ್ಗೆ ಕಾವೇರಿ ನದಿಗಿಳಿದು ಪ್ರತಿಭಟಿಸಿ, ನಂತರ ಕಾವೇರಿ ಮಾತೆಗೆ ಅಭಿಷೇಕ ಮಾಡಿದರು. ರೈತರ ಪ್ರತಿಭಟನೆಯೊಂದಿಗೆ ರಾಜ್ಯದ ಕನ್ನಡಪರ ಸಂಘಟನೆಗಳು ಕೈಜೋಡಿಸಿದ್ದು, ಶ್ರೀರಂಗಪಟ್ಟಣದ ಹನುಮಂತನಗರದಲ್ಲಿ ವಿನೂತನ ರೀತಿಯಲ್ಲಿ ನಡೆಸಿದ್ದಾರೆ. ಮಿನರಲ್ ವಾಟರ್‌ನಲ್ಲಿ ಭತ್ತದ ಪೈರು ನಾಟಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದರು. ಅಲ್ಲದೇ, ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾವೇರಿ ನದಿಗಿಳಿದು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದರು.

124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್​ಎಸ್ ಜಲಾಶಯದಲ್ಲಿಗ ಕೇವಲ 99 ಅಡಿ ನೀರು ಮಾತ್ರ ಇದೆ. ಇಲ್ಲಿಯ ರೈತರಿಗೆ ಹೊಸ ಬೆಳೆ ಬೆಳೀಬೇಡಿ ಅಂತ ಹೇಳಿರೋ ಸರ್ಕಾರ ತಮಿಳುನಾಡಿಗೆ ನಿತ್ಯ ನೀರು ಕೊಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾದ್ಯಂತ ದಿನೇ ದಿನೇ ರೈತರ ಹೋರಾಟ ಹೆಚ್ಚಾಗಿದೆ. ಇನ್ನು ಪಾಂಡವಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಸಿಎಂ ಹಾಗೂ ಡಿಸಿಎಂ ಭಾವಚಿತ್ರಕ್ಕೆ ದೊಣ್ಣೆಗಳಲ್ಲಿ ಚಪ್ಪಲಿ ಹೊಡೆದು ಆಕ್ರೋಶ ಹೊರಹಾಕಿದರು.

ಇನ್ನು ಕೆಆರ್​ಎಸ್​ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ನಡೆಯುತ್ತಿದೆ. ಅಲ್ಲದೇ ಮುಂದೆ ಕಾನೂನು ಹೋರಾಟ ಮಾಡಲೂ ನಿರ್ಧರಿಸಿದೆ. ಒಟ್ಟಾರೆ ಜಿಲ್ಲಾದ್ಯಂತ ಕಾವೇರಿ ನೀರಿಗಾಗಿ ರೈತರು ಹೋರಾಟ ಮುಂದುವರೆಸಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ