ಹಾವೇರಿ: ನಗರದ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ ಆಚರಿಸಲಾಯಿತು. ಗುರುವಾರ ಪೂರ್ವಾರಾಧನೆ, ಶುಕ್ರವಾರ ಮಧ್ಯಾರಾದನೆ, ಬೆಳ್ಳಿರಥೋತ್ಸವ ಮತ್ತು ಶನಿವಾರ ಉತ್ತರಾಧನೆ ಜರುಗಿತು.
ಉತ್ತರಾಧನೆಯ ಅಂಗವಾಗಿ ರಾಘವೇಂದ್ರಸ್ವಾಮಿಗಳ ರಥೋತ್ಸವ ಸಂಭ್ರಮದಿಂದ ನೆರವೇರಿತು. ನಗರದ ಅಗ್ರಹಾರದ ಆಶ್ವತ್ಥ ವೃಕ್ಷದಿಂದ ಆರಂಭವಾದ ರಥೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ನಂತರ ತೇರುಬೀದಿ ಆಂಜನೇಯ ದೇವಸ್ಥಾನಕ್ಕೆ ರಥೋತ್ಸವ ಆಗಮಿಸಿತು. ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಹರಿಕೃಷ್ಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಅಲ್ಲಿಂದ ತೇರುಬೀದಿ ಆಂಜನೇಯ ದೇವಸ್ಥಾನದಿಂದ ರಥೋತ್ಸವ ರಾಘವೇಂದ್ರಸ್ವಾಮಿ ಮಠದವರೆಗೆ ಸಾಗಿ ಬಂದಿತು. ರಥೋತ್ಸವಕ್ಕೆ ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿತು. ಮಠಕ್ಕೆ ರಥೋತ್ಸವ ಆಗಮಿಸುತ್ತಿದ್ದಂತೆ ರಾಘವೇಂದ್ರಸ್ವಾಮಿಗಳ ಬೆಳ್ಳಿ ಮೂರ್ತಿಯನ್ನು ರಥೋತ್ಸವಕ್ಕೆ ಪ್ರದಕ್ಷಿಣಿ ಹಾಕಿಸಲಾಯಿತು. ನಂತರ ಧಾರ್ಮಿಕ ವಿಧಾನಗಳನ್ನು ಪೂರೈಸಿ ಮಠದ ವೃಂದಾನವನಕ್ಕೆ ಕರೆತರಲಾಯಿತು