ಬಾಗಲಕೋಟೆ: ಜಿಲ್ಲಾ ಮಟ್ಟದ ಅಧಿಕಾರಿಗಳಿಬ್ಬರು ಒಂದೇ ಹುದ್ದೆಗಾಗಿ ಪರಸ್ಪರ ಹಗ್ಗಜಗ್ಗಾಟ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಅವರು ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದಿದ್ದರು. ಈ ಮಧ್ಯೆ ಡಾ.ಜಯಶ್ರೀ ಎಮ್ಮಿ ರಜೆಯಲ್ಲಿ ತೆರಳಿದ್ದಾಗ ಸರ್ಕಾರದ ಆದೇಶ ತಂದು ಡಾ.ರಾಜಕುಮಾರ್ ಯರಗಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಒಂದೇ ಹುದ್ದೆಗೆ ಒಬ್ಬರ ನಡುವೆ ಕಿತ್ತಾಟ ನಡೆಯಿತು.
”ವಿಜಯಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಯರಗಲ್ ಅವರು ಅಲ್ಲಿನ ಜಿ.ಪಂ. ಸಿಇಒ ಅವರಿಂದ ಬಿಡುಗಡೆ ಪತ್ರ ಪಡೆದಿಲ್ಲ. ಅಲ್ಲದೇ ಇಲ್ಲಿಯ ಆರೋಗ್ಯಾಧಿಕಾರಿಗಳಿಂದ ಅಧಿಕಾರ ಹಸ್ತಾಂತರ ಕೂಡ ಮಾಡಿಕೊಂಡಿಲ್ಲ. ಕಚೇರಿಯ ಬೀಗ ಒಡೆದು ಅಧಿಕಾರ ಚಲಾಯಿಸುತ್ತಿದ್ದಾರೆ” ಎಂದು ಡಾ.ಜಯಶ್ರೀ ಎಮ್ಮಿ ಆರೋಪಿಸಿದರು. ಈ ಆರೋಪವನ್ನು ತಳ್ಳಿ ಹಾಕಿರುವ ಡಾ.ಯರಗಲ್, ”ನನಗೆ ಸರ್ಕಾರ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ನೀಡಿದೆ. ಅದರಂತೆ ನಾನು ಅಧಿಕಾರ ಸ್ವೀಕರಿಸಿದ್ದೇನೆ” ಎಂದರು.