ರಜನಿಕಾಂತ್ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಶನಿವಾರ ಭೇಟಿಯಾದರು.
ಕಾಲಿವುಡ್ ಸೂಪರ್ ಸ್ಟಾರ್ ‘ತಲೈವಾ’ ರಜನಿಕಾಂತ್ ಅವರ ಜೈಲರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ.
ನಿನ್ನೆ (ಶನಿವಾರ) ರಜನಿಕಾಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಸಿಎಂ ಪಾದ ಸ್ಪರ್ಶಿಸಿದ ರಜನಿಕಾಂತ್: ಶುಕ್ರವಾರ ಲಕ್ನೋದಲ್ಲಿ ಜೈಲರ್ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿತ್ತು. ಈವೆಂಟ್ನಲ್ಲಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯು ಕೂಡಾ ಪಾಲ್ಗೊಂಡಿದ್ದರು. ಇದೀಗ ರಜನಿಕಾಂತ್ ಮತ್ತು ಯೋಗಿ ಆದಿತ್ಯನಾಥ್ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೈರಲ್ ವಿಡಿಯೋದಲ್ಲಿ, ರಜನಿಕಾಂತ್ ಅವರು ಸಿಎಂ ಯೋಗಿ ಪಾದ ಸ್ಪರ್ಶಿಸುತ್ತಿರುವುದನ್ನು ನೋಡಬಹುದು.
ಕೆಲವೇ ಕ್ಷಣಗಳಲ್ಲಿ ಆನ್ಲೈನ್ನಲ್ಲಿ ಭಾರಿ ವೀವ್ಸ್ ಪಡೆದಿರುವ ವಿಡಿಯೋದಲ್ಲಿ, ರಜನಿಕಾಂತ್ ಅವರು ಕಾರಿನಿಂದ ಇಳಿಯುವುದನ್ನು ಕಾಣಬಹುದು. ಜನರಿಗೆ, ಅಭಿಮಾನಿಗಳಿಗೆ ನಮಸ್ಕರಿಸುತ್ತಾ ಅವರು ಮುಂದೆ ಸಾಗುತ್ತಾರೆ. ಸೂಪರ್ ಸ್ಟಾರ್ ಸ್ವಾಗತಿಸಲು ಸಿಎಂ ಯೋಗಿ ಹೊರಗೆ ಆಗಮಿಸಿದ್ದರು. ಈ ವೇಳೆ ರಜನಿಕಾಂತ್ ಸಿಎಂ ಯೋಗಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸೂಪರ್ ಸ್ಟಾರ್ ಸರಳತೆ ಜನರ ಹೃದಯ ಗೆದ್ದಿದೆ. ವಿಡಿಯೋಗೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.