ಕುಶಿನಗರ (ಉತ್ತರ ಪ್ರದೇಶ): ಬೀದಿ ನಾಯಿಯ ರಕ್ಷಣೆಗೆ ಯತ್ನಿಸಿದ್ದ ನೆರೆಯ ಕುಟುಂಬದ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ಆ ಕುಟುಂಬದ 12 ವರ್ಷದ ಬಾಲಕನನ್ನು ಕೊಲೆ ಮಾಡಿ ಶವ ಚರಂಡಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಮೈನ್ಪುರ ಗ್ರಾಮದ ನಿವಾಸಿ ಮಧುಕರ್ ಲಲಿತ್ ತ್ರಿಪಾಠಿ ಎಂಬವರ ಪುತ್ರಿ ರಮಣ್ ತ್ರಿಪಾಠಿ ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಶಮ್ಶುದ್ದೀನ್ ಅಲಿಯಾಸ್ ಮಾಂಗ್ರೂ ಎಂಬಾತನೇ ಬಾಲಕನ ಕೊಲೆಗೈದ ಹಂತಕ. ಈಗಾಗಲೇ ಈತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗುರುವಾರ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಘಟನೆಯ ಹಿನ್ನೆಲೆ: ”ಬಾಲಕ ರಮಣ್ ತ್ರಿಪಾಠಿ ಕಾಣೆಯಾಗಿರುವ ಬಗ್ಗೆ ಆಗಸ್ಟ್ 1ರಂದು ಕಾಸಿಯಾ ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಮನೆ ಸುತ್ತಮುತ್ತಲು ಹುಡುಕಾಡಿದರೂ ಪತ್ತೆಯಾಗುತ್ತಿಲ್ಲ ಎಂದು ತಮ್ಮ ದೂರಿನಲ್ಲಿ ಕುಟುಂಬಸ್ಥರು ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ ಮರುದಿನವೇ ಎಂದರೆ ಆಗಸ್ಟ್ 2ರಂದು ಚರಂಡಿಯಲ್ಲಿ ಬಾಲಕನೋರ್ವನ ಶವ ದೊರೆತ ಬಗ್ಗೆ ಮಾಹಿತಿ ಸಿಕ್ಕಿತ್ತು” ಎಂದು ಪೊಲೀಸ್ ಅಧಿಕಾರಿ ಕುಂದನ್ ಸಿಂಗ್ ತಿಳಿಸಿದ್ದಾರೆ.
”ಈ ಮೃತದೇಹವನ್ನು ಪರಿಶೀಲಿಸಿದಾಗ ಇದು, ನಾಪತ್ತೆಯಾಗಿದ್ದ ರಮಣ್ ತ್ರಿಪಾಠಿ ಎಂದೇ ಖಚಿತವಾಗಿದೆ. ಈ ವೇಳೆ ಮುಖಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದರಿಂದ ಹೆಚ್ಚಿನ ತನಿಖೆ ಕೈಗೊಂಡ ಬೀದಿ ನಾಯಿ ಕುರಿತಾಗಿ ಜಗಳ ನಡೆದ ವಿಷಯ ಗೊತ್ತಾಗಿದೆ. ಬಾಲಕ ನಾಪತ್ತೆಯಾಗುವ ಕೆಲ ದಿನಗಳ ಹಿಂದೆ ಬೀದಿ ನಾಯಿಗೆ ಆರೋಪಿ ಶಮ್ಶುದ್ದೀನ್ ಥಳಿಸುತ್ತಿದ್ದ. ಗಮನಿಸಿದ ತ್ರಿಪಾಠಿ ಕುಟುಂಬ ಥಳಿತಕ್ಕೆ ಒಳಗಾಗುತ್ತಿದ್ದ ನಾಯಿಯನ್ನು ರಕ್ಷಿಸಿತ್ತು. ಈ ವೇಳೆ ಆರೋಪಿ ಅಲ್ಲಿಂದ ತೆರಳಿದ್ದ. ಆದರೆ, ಇದೇ ಕಾರಣಕ್ಕೆ ಆ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ” ಎಂದು ಅವರು ಹೇಳಿದ್ದಾರೆ.