ಬೆಂಗಳೂರು: “ನನಗೆ ಕಾಂಗ್ರೆಸ್ಸಿನ ಅವಶ್ಯಕತೆ ಇಲ್ಲ, ನಾನು ಬಿಜೆಪಿಯಲ್ಲೇ ಇರುತ್ತೇನೆ. ಒಂದು ವೇಳೆ ರಾಜಕೀಯ ಬೇಡವೆನಿಸಿದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆಯೇ ಹೊರತು, ಕಾಂಗ್ರೆಸ್ ಪಕ್ಷವನ್ನು ಮಾತ್ರ ಸೇರಲ್ಲ.
ಕಾಂಗ್ರೆಸ್ ಬಾಗಿಲು ತಟ್ಟುವ ಕೆಲಸವನ್ನೂ ಮಾಡುವುದಿಲ್ಲ” ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು.
ವೈಯಾಲಿಕಾವಲ್ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಜೊತೆ ಬಿಜೆಪಿಗೆ ಬಂದವರಲ್ಲಿ ಯಾರೇ ಪಕ್ಷ ತೊರೆಯಲು ಮುಂದಾದರೂ ನಾನು ಯಾರ ಮನವೊಲಿಕೆ ಮಾಡುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರವರ ಸ್ವಂತ ನಿರ್ಧಾರ, ಹೋಗುವವರಿಗೆ ನಾನೇಕೆ ಬೇಡ ಎನ್ನಲಿ, ಇಲ್ಲಿಂದ ಹೋಗಿ ಒಳ್ಳೆಯದಾದರೆ ಅದಕ್ಕೆ ನಾನೇಕೆ ಬೇಡವೆನ್ನಲಿ, ಹೋಗುವವರಿಗೆ ಒಳ್ಳೆಯದಾಗಲಿ” ಎಂದು ಹೇಳಿದರು.
‘ಬಿಜೆಪಿಯಲ್ಲಿ ಮೊದಲ ಬೆಂಚ್ನಲ್ಲಿ ಇದ್ದೇನೆ’: “ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬಂದರೆ ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ. ಲಾಸ್ಟ್ ಬೆಂಚ್ನಿಂದ ಮೊದಲ ಬೆಂಚಿಗೆ ಬರಲು ಇನ್ನೂ 20 ವರ್ಷ ಬೇಕು. ಈಗಾಗಲೇ 65 ವರ್ಷ ಆಗಿದೆ. ಇನ್ನು 20 ವರ್ಷ ಅಂದ್ರೆ 85 ವರ್ಷ ಆಗಲಿದೆ. ಈಗ ಬಿಜೆಪಿಯಲ್ಲಿ ಮೊದಲ ಬೆಂಚ್ನಲ್ಲಿ ಇದ್ದೇನೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನನ್ನೊಂದಿಗೆ ಬಂದಿರುವ ಎಲ್ಲರೂ ಬಿಜೆಪಿ ಪಕ್ಷದಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಮತ್ತೆ ಕಾಂಗ್ರೆಸ್ಗೆ ಹೋದರೆ ಕಡೆಯ ಸಾಲಿನಲ್ಲಿ ಕೂರಬೇಕು. ನಾನಂತೂ ಅಂತ ಕೆಲಸ ಮಾಡಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“17 ಶಾಸಕರಲ್ಲಿ 16 ಜನ ಕಾಂಗ್ರೆಸ್ಗೆ ಹೋಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಾನಂತೂ ಹೋಗುವುದಿಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿದ್ದರಾಮಯ್ಯ, ಪರಮೇಶ್ವರ್ ಸೇರಿ ವೈಯಕ್ತಿಕವಾಗಿ ಯಾರ ಜೊತೆಯಲ್ಲಿಯೂ ನನಗೆ ಯಾವುದೇ ದ್ವೇಷ ಇಲ್ಲ. ರಾಜಕೀಯವಾಗಿ ಅವರ ಶಕ್ತಿಮೀರಿ ನನ್ನನ್ನು ಸೋಲಿಸಲು ಪ್ರಯತ್ನಪಟ್ಟಿದ್ದಾರೆ. ತಾಯಿ ರಾಜರಾಜೇಶ್ವರಿ ಆಶೀರ್ವಾದ ಹಾಗೂ ಮತದಾರರ ಮತ ಭಿಕ್ಷೆಯಿಂದ ನಾನು ಶಾಸಕನಾಗಿದ್ದೇನೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಅಧಿಕಾರಕ್ಕೋಸ್ಕರ ಕಾಂಗ್ರೆಸ್ಗೆ ಹೋಗುವ ಕೆಲಸ ನಾನು ಮಾಡುವುದಿಲ್ಲ. ವಿರೋಧ ಪಕ್ಷದಲ್ಲಿ ನಾನು ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.