ಬಾಗಲಕೋಟೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯಲ್ಲ. ಅಲ್ಲಿಯ ಸ್ಪೀಕರ್, ಎಷ್ಟು ಬಾರಿ ನಮ್ಮ ನಾಯಕರನ್ನು ಹೊರ ಹಾಕಿದ್ದಾರೆ? ಎಷ್ಟು ಹೊತ್ತು ಹೊರಹಾಕಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷದ ಮುಖಂಡರಿಗೆ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಅದ್ರ ಬಗ್ಗೆ ಮಾತನಾಡಲು ಯೋಗ್ಯತೆ ಅವರಿಗೆ ಇಲ್ಲ, ಮೊದಲು ಬಿಜೆಪಿಗರು ತಾವು ತಿದ್ದಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇದೇ ಸಮಯದಲ್ಲಿ ಗ್ಯಾರಂಟಿ ಯೋಜನೆ ವೈಫಲ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಕೊಡುವ ಗ್ಯಾರಂಟಿಗಳನ್ನು ಜನ ಅನುಭವಿಸ್ತಿದ್ದಾರೆ. ಕಾಂಗ್ರೆಸ್ನವರು ಇಷ್ಟೆಲ್ಲಾ ಕಾರ್ಯಕ್ರಮ ಕೊಟ್ರು ಎಂಬ ಖುಷಿಯಲ್ಲಿದ್ದಾರೆ ಜನ. ಬಿಜೆಪಿಯವರು ಮೋದಿಯವರ ಭ್ರಮೆಯಲ್ಲಿದ್ದಾರೆ. ಮೋದಿಯವರು ಬಂದರು, ಹೋದರು, ಎಲ್ಲೆಲ್ಲಿ ಓಡಾಡಿದ್ರು, ಎಷ್ಟು ಸೀಟ್ ಗೆದ್ರು ನೋಡಿದಿರಲ್ಲ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.
ಸಿದ್ದರಾಮಯ್ಯನಿಗೆ 136 ಎಂಎಲ್ಎ ಸಪೋರ್ಟ್:ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನಿಗೆ 136 ಎಂ ಎಲ್ ಎ ಗಳ ಸಪೋರ್ಟ್ ಇದೆ. ಹೈ ಕಮಾಂಡ್ದ ಬೆಂಬಲವೂ ಇದೆ. ಆದ್ದರಿಂದ ಇಂತಹ ಮಾತುಗಳಿಗೆ ಬೆಲೆ ಇಲ್ಲ.