ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಇವತ್ತು ಸಿಐಡಿ ಹಿರಿಯ ಅಧಿಕಾರಿ ಡಿಜಿಪಿ ಡಾ.ಎಂ ಎ ಸಲೀಂ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಕಾಲ ಸ್ಥಳಿಯರ ಜೊತೆ ಈಗಾಗಲೇ ತನಿಖೆ ಮಾಡಿರುವ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಕಾಮಕುಮಾರ ನಂದಿ ಮಹಾರಾಜರ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದರು.
ಕೊನೆ ಹಂತಕ್ಕೆ ಸಿಐಡಿ ತನಿಖೆ:ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶಿಸಿದರು. ಜುಲೈ 23ರಿಂದ ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್ ಹಾಗೂ ಅಧಿಕಾರಿಗಳ ತಂಡ ವಾರದಿಂದ ಚಿಕ್ಕೋಡಿಯಲ್ಲಿ ಬಿಡು ಬಿಟ್ಟು ಇಂಚು ಇಂಚಾಗಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಕೊನೆ ಹಂತಕ್ಕೆ ಬಂದು ತಲುಪಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಸಿಐಡಿ ಡಿಜಿಪಿ ಡಾ. ಎಂ ಎ ಸಲೀಂ ಅವರಿಗೆ ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್, ಸಿಐಡಿ ಎಸ್ಪಿ ವೆಂಕಟೇಶಕುಮಾರ್, ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಸೇರಿ ಹಲವರು ಅಧಿಕಾರಿಗಳು ಜೊತೆಯಾಗಿ ನಂದಿ ಪರ್ವತಕ್ಕೆ ಭೇಟಿ ನೀಡಿದರು.